ಪ್ರಕಾಶ್ ರೈ
ಪ್ರಕಾಶ್ ರೈ
ಕನ್ನಡಿಗ ಪ್ರಕಾಶ್ ರೈ ಅವರು ಪ್ರಕಾಶ್ ರಾಜ್ ಆಗಿ ಚಲನಚಿತ್ರ ರಂಗದಲ್ಲಿ ನಟರಾಗಿ ಮತ್ತು ನಿರ್ಮಾಪಕರಾಗಿ ಹೆಸರಾಗಿದ್ದಾರೆ.
ಪುತ್ತೂರಿನ ಪ್ರಕಾಶ್ ರೈ 1965ರ ಮಾರ್ಚ್ 26ರಂದು ಜನಿಸಿದರು. ಬೆಂಗಳೂರಿನಲ್ಲಿ ಸೈಂಟ್ ಜೋಸೆಫ್ಸ್ ಓದಿನ ಸಮಯದಲ್ಲಿ ನಾಟಕಗಳಲ್ಲಿ ನಟಿಸಿ ಮುಂದೆ ಹವ್ಯಾಸಿ ರಂಗಭೂಮಿ ಮತ್ತು ದೂರದರ್ಶನದ ಪಾತ್ರಗಳಿಗೆ ಬಂದರು. ಅಂದಿನ ದಿನದಲ್ಲಿ ಬರುತ್ತಿದ್ದ ಗುಡ್ಡದ ಭೂತ, ಬಿಸಿಲು ಕುದುರೆ ಇತ್ಯಾದಿ ದೂರದರ್ಶನದ ಪಾತ್ರ ಹಾಗೂ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಲ ನೂಕುತ್ತಿದ್ದ ಈ ಹುಡುಗ.
ಹೀಗಿದ್ದ ದಿನಗಳಲ್ಲಿ ‘ಹರಕೆಯ ಕುರಿ’ ಎಂಬ ಚಿತ್ರದಲ್ಲಿನ ಪ್ರಕಾಶ್ ರೈ ಅಭಿನಯ ವಿಮರ್ಶಕರ ಮೆಚ್ಚುಗೆ ಗಳಿಸಿತು. ಜೊತೆಗೆ ಆ ಚಿತ್ರದಲ್ಲಿ ನಟಿಸಿದ್ದ ಪ್ರಸಿದ್ಧ ನಟಿ ಗೀತ ಅವರು ನಮ್ಮ ಹುಡುಗನನ್ನು ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರಿಗೆ ಪರಿಚಯಿಸಿದರು. ಮುಂದಿನದು ಇತಿಹಾಸ. ಬಾಲಚಂದರ್ ಗರಡಿಯಲ್ಲಿ ಪಳಗಿ ಯಶಸ್ಸು ಗಳಿಸಿದ ಮೇಲೆ ಕೇಳಬೇಕೆ! ಆತನಿಗೆ ಬಿಡುವು ಸಿಗದಷ್ಟು ನಿರಂತರ ಕೆಲಸ. ಆತನ ಹೆಸರು ಪ್ರಕಾಶ್ ರಾಜ್ ಎಂದಾಗಿ ಬದಲಾಯಿತು. ಎಲ್ಲಾ ತಮಿಳು ಚಿತ್ರಗಳಲ್ಲೂ, ತೆಲುಗು ಚಿತ್ರಗಳಲ್ಲಿಯೂ ಆತ ಇರಲೇಬೇಕು ಎನ್ನುವಂತಾಗಿ ಹೋಯಿತು. ಮಲಯಾಳಂನಲ್ಲೂ ಪ್ರಸಿದ್ಧರಾದರು. ಆತ ಸರಾಗವಾಗಿ ನಟಿಸುವ ರೀತಿ, ಸಂಭಾಷಣೆ ಹೇಳುವ ಪರಿ, ಶಾರೀರಿಕ ಅಭಿವ್ಯಕ್ತಿ ಆತನನ್ನು ಉತ್ತುಂಗಕ್ಕೇರಿಸಿತು. ಬಹಳಷ್ಟು ನಿರ್ಮಾಪಕ ನಿರ್ದೇಶಕರು ಆತನನ್ನು ಉಪಯೋಗಿಸಿಕೊಂಡು ಆತನನ್ನೂ ಶ್ರೀಮಂತನನ್ನಾಗಿಸಿ ತಾವೂ ಶ್ರೀಮಂತರಾಗುವಂತಹ ವಾಣಿಜ್ಯಕ ವ್ಯವಹಾರ ಧ್ಯೇಯದ ಚಿತ್ರಗಳನ್ನು ನಿರ್ಮಿಸಿದ್ದೇ ಹೆಚ್ಚು. ಅವುಗಳಲ್ಲಿ ನಾಯಕಿಗೆ ಅಪ್ಪನಾಗಿ ನಾಯಕನಿಗೆ ಖಳನಾಗಿ ಮೂಡಿದ್ದುದು ಬಹುಪಾಲು. ಆದರೆ ಕೆ. ಬಾಲಚಂದರ್, ಮಣಿರತ್ನಂ, ಪ್ರಿಯದರ್ಶನ್, ನಾಗಾಭರಣ ಅಂತಹವರಿಗೆ ಆತನ ಸಾಮರ್ಥ್ಯ ಕೂಡಾ ಗೊತ್ತಿತ್ತು.
ಪ್ರಕಾಶ್ ರೈ 1998ರ ವರ್ಷದಲ್ಲಿ ಇರುವರ್ ಚಿತ್ರದಲ್ಲಿನ ಪೋಷಕ ಪಾತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು. 1999, 2002, 2003ರ ವರ್ಷಗಳಲ್ಲಿ ಆತನ ಅಭಿನಯ ರಾಷ್ಟ್ರಪ್ರಶಸ್ತಿ ಆಯ್ಕೆ ಮಂಡಳಿಯ ವಿಶೇಷ ಜ್ಯೂರಿಗಳ ಮೆಚ್ಚುಗೆ ಪಡೆಯಿತು. 2003ರ ವರ್ಷದಲ್ಲಿ ವಿಶೇಷ ಜ್ಯೂರಿ ಮೆಚ್ಚುಗೆಯ ಬಹುಮಾನ ನೀಡುವಾಗ ಆ ವರ್ಷದ ತಮಿಳು, ಕನ್ನಡ ಮತ್ತು ತೆಲುಗಿನ ಒಟ್ಟು ಹನ್ನೆರಡು ಚಿತ್ರಗಳಲ್ಲಿ ಪ್ರಶಂಸನೀಯ ಅಭಿನಯ ನೀಡಿದ್ದಾನೆ ಎಂದು ಕೊಂಡಾಡಿತು. 2008ರ ವರ್ಷದಲ್ಲಿ ಕಾಂಚೀವರಂ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಕಾಶ್ ರೈ ಅವರಿಗೆ ರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿ ಸಂದಿತು.
ತಮಿಳು, ತೆಲುಗಿನ ಚಿತ್ರಗಳಲ್ಲಿ ಪ್ರಕಾಶ್ ರೈ ಅವರಿಗೆ ಸಂದಿರುವ ರಾಜ್ಯ ಮತ್ತು ಫಿಲಂ ಫೇರ್ ಅಂತಹ ಪ್ರಶಸ್ತಿಗಳು ಹಲವಾರು. ಹಿಂದಿಯಲ್ಲೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆಗಾಗ ಕನ್ನಡದಲ್ಲೂ ಬಂದು ನಟಿಸಿ ಹೋಗುತ್ತಿದ್ದಾರೆ. ಅವರು ನಟಿಸಿದ ‘ನಾಗಮಂಡಲ’ದಲ್ಲಿನ ಅವರ ಅಭಿನಯ ಜನರ ಮನಸ್ಸಿನಲ್ಲಿ ಚಿರಸ್ಮರಣೀಯ. ಗೆಳೆಯ ಸುರೇಶ್ ಜೊತೆಗೂಡಿ ‘ನಾನು ನನ್ನ ಕನಸು’, 'ಒಗ್ಗರಣೆ' ಚಿತ್ರಗಳನ್ನು ಸ್ವತಃ ನಿರ್ದೇಶಿಸಿ ಉತ್ತಮ ಯಶಸ್ಸು ಕೂಡಾ ಕಂಡರು. ಸುರೇಶರ ನಿರ್ದೇಶನದಲ್ಲಿ 'ಪುಟ್ಟಕ್ಕನ ಹೈವೇ' ಚಿತ್ರ ನಿರ್ಮಿಸಿದ್ದಕ್ಕಾಗಿ ಶ್ರೇಷ್ಠ ನಿರ್ಮಾಪಕರಾರಾಗಿ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದರು. ಕನ್ನಡದ ಪ್ರೀತಿಗಾಗಿ ಉತ್ತಮ ಚಿತ್ರಕತೆ ಇದ್ದ ಪಕ್ಷದಲ್ಲಿ ಕೆಲವೊಮ್ಮೆ ಹಣ ಕೂಡಾ ಸ್ವೀಕರಿಸದೆ ಕೆಲಸ ಮಾಡಿದ್ದಾರೆ. ಅವರು ಬಹುಭಾಷಾ ಚಿತ್ರವಾಗಿ ನಿರ್ಮಿಸಿ ನಿರ್ದೇಶಿಸಿದ 'ಒಗ್ಗರಣೆ' ಕನ್ನಡದಲ್ಲಿ ಯಶಸ್ಸು ಕಂಡಿತು.
ಪ್ರಕಾಶ್ ರೈ ಚಿತ್ರದುರ್ಗ ಜಿಲ್ಲೆಯ ಬಂದ್ಲರಹಟ್ಟಿ ಗ್ರಾಮ ಮತ್ತು ತೆಲಂಗಾಣದ ಕೊಂಡರೆಡ್ಡಿಪಲ್ಲೆ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಸಮಾಜುಮುಖಿ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎನ್ನಲಾಗಿದೆ.
On the birthday of talented Prakash Rai, Prakash Raj
ಕಾಮೆಂಟ್ಗಳು