ಗೋನವಾರ ಕಿಶನ್ ರಾವ್
ಗೋನವಾರ ಕಿಶನ್ ರಾವ್
ಗೋನವಾರ ಕಿಶನ್ ರಾವ್ ಅವರು ಹೊರರಾಜ್ಯದಲ್ಲಿದ್ದು ಕನ್ನಡ ಸೇವೆಯ ನಿಷ್ಠಾವಂತ ವ್ರತಧಾರಿಯಾಗಿ ಬಹುಮುಖಿಯಾಗಿ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.
ಗೋನವಾರ ಕಿಶನ್ ರಾವ್ ಅವರು 1953ರ ಏಪ್ರಿಲ್ 26ರಂದು ರಾಯಚೂರು ಜಿಲ್ಲೆಯ ಗೋನವಾರದಲ್ಲಿ ಜನಿಸಿದರು. ತಂದೆ ರಾಮಚಂದ್ರರಾವ್ ಕುಲಕರ್ಣಿ. ತಾಯಿ ಸೀತಾಬಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಗೋನವಾರದಲ್ಲಿ, ನಂತರ ಮಾಧ್ಯಮಿಕ ಪ್ರೌಢ, ಪದವಿ ಓದು ರಾಯಚೂರಿನ ಹಮದರ್ದ ಶಾಲೆ, ಲಕ್ಷ್ಮೀ ವೆಂಕಟೇಶ ದೇಸಾಯಿ ಕಾಲೇಜುಗಳಲ್ಲಿ ನಡೆಯಿತು. ಮುಂದೆ ಮೈಸೂರಿನ ಮಾನಸ ಗಂಗೋತ್ರಿಯಿಂದ ಎಂ.ಎ.(ಕನ್ನಡ) ಮತ್ತು
ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪಡೆದರು.
ಕಿಶನ್ ರಾವ್ ಅವರು ನಿವೃತ್ತ ಕನ್ನಡ ಉಪನ್ಯಾಸಕರು. ಅವರು ಹೈದರಾಬಾದಿನ ನೃಪತುಂಗ ಕನ್ನಡ ವಿದ್ಯಾಸಂಸ್ಥೆಗಳಲ್ಲಿ ಮೂರು ದಶಕಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ನಿವೃತ್ತಿ ನಂತರವೂ, ಎರಡು ವರ್ಷಗಳಕಾಲ ಸಂದರ್ಶಕ ಉಪನ್ಯಾಸರಾಗಿ ಉಸ್ಮಾನಿಯಾ ವಿಶ್ವವಿದ್ಯಾಲದ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ತರಗತಿಗಳಿಗೆ ಬೋಧನಾ ವೃತ್ತಿ ನಡೆಸಿದರು.
ಕಿಶನ್ ರಾವ್ ಅವರು ಕರ್ನಾಟಕ ಸಾಹಿತ್ಯಮಂದಿರದ ಕಾರ್ಯದರ್ಶಿಯಾಗಿ, ಸಹ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ ಅಲ್ಲದೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುದೀರ್ಘ ಸೇವೆ ಸಲ್ಲಿಸಿದವರು. ನಿವೃತ್ತಿಯ ನಂತರ ನೃಪತುಂಗ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಎರಡು ಅವಧಿಗೆ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕಿಶನ್ ರಾವ್ ಅವರಿಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆಸಕ್ತಿ ಇದ್ದು, ಅಂಕಣ ಬರಹ, ಅನುವಾದ, ವಿಮರ್ಶೆ, ನಾಟಕ ರಚನೆಯಲ್ಲಿ ತೊಡಗಿದ್ದಾರೆ. ಇವರ ಕತೆಗಳು, ವಿಮರ್ಶಾ ಬರಹಗಳು ನಾಟಕಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಾಗರದ ಅಕ್ಷರ ಪ್ರಕಾಶನದಿಂದ ಕಿಶನ್ ರಾವ್ ಅವರ ಮಕ್ಕಳನಾಟಕ ಝುಕ್ ಝುಕ್ ಭಯ್ಯಾ ತಾಲಮ್ ತಾಲ್ ಪ್ರಕಟಗೊಂಡಿದೆ. ತೆಲುಗು ವಿಪ್ಲವ ಸಾಹಿತಿ ಶ್ರೀ. ಶ್ರೀ ಯವರ ಮಹಾಪ್ರಸ್ತಾನ ಸಂಕಲನದಿಂದ ಹಲವು ಕವಿತೆಗಳ ಇವರ ಅನುವಾದ ಅಂದಿನ ದಿನಗಳಲ್ಲಿ ಡಾ.ಯು.ಆರ್ ಅನಂತ ಮೂರ್ತಿ ಸಂಪಾದಿತ ಋಜುವಾತು ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಮಾಲಿನ ಮಲ್ಯ ಅವರು ಸಂಪಾದಿಸಿದ 'ಹತ್ತಿರದಿಂದ ಕಂಡ ಹತ್ತಾರುಮುಖಗಳು' ಪುಸ್ತಕದಲ್ಲಿ ಇವರ 'ಕಾರಂತರೊಂದಿಗೆ ಒಂದು ದಿನ' ಬರಹ ಪ್ರಕಟಗೊಂಡಿದೆ. ಇವರ ನಾಲ್ಕು ಕಥೆಗಳ ಅನುವಾದ " ಅಂತರ್ ಭಾರತಿ ಕಥೆಗಳು" ಸಂಪುಟದಲ್ಲಿ ಪ್ರಕಟಗೊಂಡಿದೆ. ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರಕ್ಕಾಗಿ ಎಂಟು ವರ್ಷಗಳ ಕಾಲ 'ಪರಿಚಯ' ಸಾಹಿತ್ಯ ಪತ್ರಿಕೆ ಸಂಪಾದಿಸಿ ಕೊಟ್ಟ ಹಿರಿಮೆ ಇವರದಾಗಿದೆ. ಕುಮಾರ ವ್ಯಾಸ ಮಹಾಭಾರತ ಅಧಾರಿತ ಸುಮಾರು೨೦ ಕ್ಕೂ ಹೆಚ್ಚು ಅಂಕಣ ಬರಹಗಳು "ನುಡಿಕಾರಣ" ಶೀರ್ಷಿಕೆಯಡಿ ನಸುಕು.ಕಾಮ್ ನಲ್ಲಿ ಪ್ರಕಟವಾಗಿವೆ.
ಕಿಶನ್ ರಾವ್ ಅವರು ಹೈದರಾಬಾದಿನ "ಅನ್ವೇಷಕರು" ರಂಗತಂಡದಲ್ಲಿ ಸಕ್ರಿಯರಾಗಿದ್ದು, ಅನೇಕ ನಾಟಕಗಳಲ್ಲಿ ಅಭಿನಯ ಹಾಗೂ ರಂಗದ ಹಿಂದೆ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಪ್ರದರ್ಶನಗಳು, ದೆಹಲಿ ಅಲ್ಲದೆ, ಬೆಂಗಳೂರು, ಮೈಸೂರು ಧಾರವಾಡ, ಬಿಜಾಪುರ, ಜಮಖಂಡಿ, ರಾಯಚೂರುಗಳಲ್ಲಿ ನಡೆದಿವೆ. 'ಹೀಂಗೊಂದು ಊರಾಗ' (ತೆಲುಗುವಿನಂದ) ಮತ್ತು ಬಾದಲ್ ಸರಕಾರ ಇವರ "ರಾಮ್ ಶ್ಯಾಮ್ ಯದು" ನಾಟಕಗಳ ಅನುವಾದ ಮಾಡಿದ್ದಾರೆ. ಹೀಂಗೊಂದು ಊರಾಗ ನಾಟಕ, ಅನೇಕ ಯಶಸ್ವಿ ಪ್ರದರ್ಶನಗಳನ್ನು ಕಂಡಿವೆ.
ಕಿಶನ್ ರಾವ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸಿದ ಬಹುಭಾ಼ಷಾ ಕಥಾನುವಾದ ಕಮ್ಮಟದಲ್ಲಿ ಭಾವಹಿಸಿದ್ದಾರೆ. 1989ರಿಂದ ರಿಂದ ಮೂರು ವರುಷಗಳ ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದಾರೆ.ಅನೇಕ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಹೈದರಾಬಾದಿನ ಪ್ರಾತಿನಿಧಿತ್ವ ನಿರ್ವಹಿಸಿದ್ದಾರೆ. ಕಿಶನ್ ರಾವ್ ಅವರು ಅನೇಕ ಪ್ರಸಿದ್ಧ ಸಾಹಿತಿಗಳ ಸಂದರ್ಶನ ಮಾಡಿದ್ದಾರೆ. ಬಾನುಲಿಯಲ್ಲಿ ಮತ್ತು ಅನೇಕ ವೇದಿಕೆಗಳಲ್ಲಿ ಉಪನ್ಯಾಸ ನೀಡಿದ್ದಾರೆ.
ಕನ್ನಡ ಸೇವೆಯ ನಿಷ್ಠಾವಂತ ವ್ರತಧಾರಿಯಾದ ಕಿಶನ್ ರಾವ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
Happy birthday Kishan Rao Gonwar 🌷🙏🌷
ಸನಾನ್ಯ ಶ್ರೀ ತಿರು ಶ್ರೀಧರ ಸರ್ ಇವರು ತುಂಬಾ ಅಪ್ತವಾಗಿ ನನ್ನ ಜನ್ಮ ದಿನದಂದು ಲೇಖನ ಬರೆದು ಶುಭಾಶಯ ತಿಳಿಸಿದ್ದಾರೆ.ಅವರಿಗೂ,ಮತ್ತು ಸಲ್ಲಾಪ ಜಾಲತಾಣಕ್ಕೂ ತುಂಬು ಮನದ ನಮನಗಳು ಧನ್ಯವಾದಗಳು.🙏🙏🙏🙏
ಪ್ರತ್ಯುತ್ತರಅಳಿಸಿ🙏🙏🌹
ಪ್ರತ್ಯುತ್ತರಅಳಿಸಿ