ಜಯವಂತಿದೇವಿ
ಜಯವಂತಿದೇವಿ ಹಿರೇಬೆಟ್
ಜಯವಂತಿದೇವಿ ಹಿರೇಬೆಟ್ ಕನ್ನಡ ಸುಗಮ ಸಂಗೀತಲೋಕದ ಮಹಾನ್ ತಾರೆ ಎನಿಸಿದ್ದವರು. ಅವರು ಪ್ರಪ್ರಥಮ ಶಿಶುನಾಳ ಷರೀಫ್ ಪ್ರಶಸ್ತಿ ಗೌರವಕ್ಕೆ ಪಾತ್ರರಾದವರು.
ಜಯವಂತಿದೇವಿ ಅವರ ಹೆಸರು ಕೇಳಿದಾಕ್ಷಣ ಕನ್ನಡಿಗರೆಲ್ಲರ ಮನಸ್ಸು ಮೆಲುಕು ಹಾಕುವುದು “ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೆ?” ಎಂಬ ಕೆ.ಎಸ್. ನರಸಿಂಹಸ್ವಾಮಿಯವರ ಕವನ. ಆ ಕವನವನ್ನು ಅಜರಾಮರಗೊಳಿಸಿದ ಕೀರ್ತಿ ಜಯವಂತಿದೇವಿಯರಿಗೇ ಸಲ್ಲಬೇಕು. ಅವರು ಹಾಡಿರುವ 'ಹೂವ ತರುವರ ಮನೆಗೆ ಹುಲ್ಲ ತರುವ', 'ತಲ್ಲಣಿಸದಿರು ಕಂಡ್ಯ ತಾಳು ಮನವೆ' ಹಾಡುಗಳು ಕನ್ನಡ ಭಕ್ತಿಗೀತೆಗಳ ಸಾಲಿನಲ್ಲಿ ಸುಂದರ ಕಲಾಕುಸುಮಗಳು. ಅವರು 'ಭಾಗ್ಯದ ಲಕ್ಷ್ಮೀಭಾರಮ್ಮ' ಗೀತೆಯನ್ನು ಹಾಡಿರುವ ರೀತಿ ಎಲ್ಲರಿಗಿಂತ ವಿಭಿನ್ನ ಮಾತ್ರವಲ್ಲ ಯಾರೋ ಹೃದಯತಟ್ಟಿ ಆ ಮಹಾತಾಯಿ ಲಕ್ಷ್ಮಿಯನ್ನು ಬರಮಾಡಿಕೊಳ್ಳುವಂತ ಆಪ್ತತೆಯನ್ನು ನೀಡುತ್ತದೆ. ಡಾ. ಭೀಮಸೇನ ಜೋಷಿ ಅವರೊಂದಿಗೆ ಅವರು ಹಾಡಿರುವ 'ಇಂದು ಎನಗೆ ಗೋವಿಂದ' ಕೂಡಾ ಅಷ್ಟೇ ಆಪ್ತವಾದದ್ದು. ಅವರು ವಿವಾಹವಾಗಿ ಪುಣೆಯಲ್ಲಿ ನೆಲೆಸಿದ ಕಾರಣ ಕರ್ನಾಟಕದಲ್ಲಿನ ಕನ್ನಡದ ಅಭಿಮಾನಿಗಳಿಗೆ ಸ್ವಲ್ಪ ವಿರಳವಾಗಿ ಕಂಡರೂ ಮುಂಬೈ ಕನ್ನಡಿಗರಿಗೆ ಆಗಾಗ ಕಂಡರು. ತಾವು ಹಾಡಿದ ಗೀತೆಗಳಲ್ಲೆಲ್ಲಾ ತಮ್ಮದೇ ಆದ ವಿಶಿಷ್ಟ ಮುದ್ರೆಯೊಂದಿಗೆ ಜನಮನದಲ್ಲಿ ನಿತ್ಯ ವಿರಾಜಮಾನೆಯಾದರು
ಜಯವಂತಿದೇವಿಯವರು 1927ರ ಏಪ್ರಿಲ್ 24ರಂದು ಮಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಸೀತಾದೇವಿ ಅವರು ಮೊಳಹಳ್ಳಿ ಶಿವರಾಯರ ಮಗಳು. ತನುಮನಧನವನ್ನು ಸಮಾಜ ಸೇವೆಗೇ ಅರ್ಪಿಸಿದ್ದ ಶಿವರಾಯರು ಪುತ್ತೂರಿನಲ್ಲಿ ಪ್ರಸಿದ್ಧ ವಕೀಲರಾಗಿದ್ದರು. ಜಯವಂತಿಯವರ ತಂದೆ ಪಡುಕೋಣೆ ರಮಾನಂದರಾಯರು ಬರಹಗಾರರು. ರಮಾನಂದರ ತಂದೆಯವರು ಪಡುಕೋಣೆ ನರಸಿಂಗರಾಯರು. ಪುತ್ತೂರಿನಲ್ಲೇ ನೆಲೆಸಿದ್ದ ಅವರು ಮಣ್ಣಿನ ಕಲಾಕೃತಿಗಳನ್ನು ಮಾಡುವುದರಲ್ಲೂ, ತೆಂಗಿನ ಚಿಪ್ಪಿನ ಕಲಾಕೃತಿಗಳನ್ನು ಮಾಡುವುದರಲ್ಲಿಯೂ ಹೆಸರುವಾಸಿಯಾಗಿದ್ದರು. ಅಜ್ಜಿ ಸುಶ್ರಾವ್ಯವಾಗಿ ಎರಡು, ಮೂರು ಭಾಷೆಗಳಲ್ಲಿ ಭಜನೆಯನ್ನು ಹಾಡುವುದರಲ್ಲಿ ನಿಷ್ಣಾತರಾಗಿದ್ದರು. ಅಂದದ ಹೂ ಮಾಲೆಗಳನ್ನೂ ಕಟ್ಟುತ್ತಿದ್ದರು. ನರಸಿಂಗರಾಯರ ಕೊನೆಯ ತಮ್ಮ ಶಿವಶಂಕರ. ಶಿವಶಂಕರ್ ಅವರ ಮಕ್ಕಳೇ ಪ್ರಸಿದ್ಧ ನಟ ಗುರುದತ್ ಹಾಗೂ ದಿಗ್ದರ್ಶಕ ಆತ್ಮಾರಾಮ್. ಹೀಗಾಗಿ ಜಯವಂತಿದೇವಿಯವರ ಮನೆತನವೇ ಸಂಗೀತ, ಸಾಹಿತ್ಯ, ನಾಟಕ ಇತ್ಯಾದಿ ಕಲೆಗಳ ಆಗರವಾಗಿತ್ತು. ಮನೆಯ ಪರಿಸರವೇ ಕಲಾಮಯವಾಗಿದ್ದಾಗ ಜಯವಂತಿದೇವಿಯವರ ಮನಸ್ಸು ಸಂಗೀತದ ಕಡೆಗೆ ಒಲಿದದ್ದು ಆಶ್ಚರ್ಯವಲ್ಲ. ಅವರ ಅಕ್ಕ ಚಂದ್ರಭಾಗಾದೇವಿಯವರು ನೃತ್ಯಗಾರ್ತಿ. ಮತ್ತೊಬ್ಬ ತಂಗಿ ಶಾಂತಿ ಚಿತ್ರಕಲಾವಿದೆ. ಇನ್ನೊಬ್ಬ ತಂಗಿ ಯಶೋಧರ ಬರಹಗಾರ್ತಿ. ಪ್ರಭಾಶಂಕರ ಇವರ ಅಣ್ಣ ಸಾಹಿತ್ಯಪ್ರೇಮಿ. ಕಲೆ ಮತ್ತು ಸಂಸ್ಕೃತಿಗಳ ನೆಲೆವೀಡು ಇವರ ಮನೆ.
ಜಯವಂತೀದೇವಿಯವರು ಪುತ್ತೂರಿನಲ್ಲಿನ ಹೈಯರ್ ಎಲಿಮೆಂಟ್ರಿ ಗರ್ಲ್ಸ್ ಸ್ಕೂಲಿನಲ್ಲಿ ಎಂಟನೇ ಇಯತ್ತೆಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದರು. ಇವರ ತಂದೆಯವರಿಗೆ ಮದ್ರಾಸಿಗೆ ವರ್ಗವಾದ ಬಳಿಕ, ಅಲ್ಲಿ ಕನ್ನಡ ಶಾಲೆ ಇಲ್ಲದೆ, ಕಾನ್ವೆಂಟಿಗೆ ಹೋಗಲು ಇಷ್ಟಪಡದೆ ಇದ್ದುದರಿಂದ, ಇವರ ಮುಂದಿನ ವಿದ್ಯಾಭ್ಯಾಸ ನಿಂತಿತು. ಪುತ್ತೂರಿನಲ್ಲಿ ಇದ್ದಾಗ ಡಾ. ಶಿವರಾಮಕಾರಂತರು ಪ್ರಯೋಗಕ್ಕಾಗಿ ನಡೆಸಿದ ‘ಬಾಲವನ’ದಲ್ಲಿ ಒಂದು ವರ್ಷ ವಿದ್ಯಾಭ್ಯಾಸ ಮಾಡಿದ್ದರು.
ಜಯವಂತಿಯವರಿಗೆ ಸಂಗೀತದ ಮೊಟ್ಟ ಮೊದಲ ಗುರು ಅವರ ತಾಯಿ. ತಾಯಿಯವರಿಂದ ಅನೇಕ ಹಾಡುಗಳನ್ನು ಕಲಿತು ಹಾಡುತ್ತಿದ್ದರು. ಹಿಂದುಸ್ತಾನಿ ಸಂಗೀತದ ನೆಲೆಗಟ್ಟನ್ನು ಮೊದಲು ಹಾಕಿಕೊಟ್ಟವರು ಜಯವಂತಿಯವರ ಚಿಕ್ಕಪ್ಪ ಪಡುಕೋಣೆ ಪ್ರಭಾಕರರಾವ್. ಇದರ ಜೊತೆಗೆ ಬೊಂಬಾಯಿಯಿಂದ ಯಾರಾದರೂ ಕಲಾವಿದರು ಬಂದರೆ ಅವರಿಂದ ಹಿಂದಿ, ಮರಾಠಿ ಹಾಡುಗಳನ್ನೂ ಕಲಿಯಲು ತಾಯಿ ಸೀತಾದೇವಿಯವರು ಪ್ರೋತ್ಸಾಹಿಸುತ್ತಿದ್ದುದರಿಂದ, ಆ ಭಾಷೆಯ ಹಾಡುಗಳನ್ನೂ ಕಲಿಯುವ ಅವಕಾಶವಾಯಿತು. ಶಿವರಾಮ ಕಾರಂತರು ನಡೆಸುತ್ತಿದ್ದ ಪ್ರಸಿದ್ಧ ದಸರಾ ಮಹೋತ್ಸವಕ್ಕೆಂದು ಬರುತ್ತಿದ್ದ ಅನೇಕ ಕಲಾವಿದರ ಸಾನ್ನಿಧ್ಯ ಜಯವಂತಿಯವರ ಕಲಾಜೀವನಕ್ಕೆ ಮಾರ್ಗದರ್ಶಕವಾಗಲು ಸಹಾಯಕವಾಯಿತು.
ಜಯವಂತಿಯವರ ತಂದೆ ರಮಾನಂದರಾಯರಿಗೆ ಮದ್ರಾಸಿಗೆ ವರ್ಗವಾದಾಗ, ಅಲ್ಲೊಂದು ಬಾಡಿಗೆ ಮನೆಯನ್ನು ಹಿಡಿದರು. ಇವರ ಮನೆಯ ಪಕ್ಕದಲ್ಲಿ ಪ್ರಸಿದ್ಧ ಚಿತ್ರಪಟು, ಸಂಗೀತಗಾರ, ನಿರ್ದೇಶಕರಾದ ವಿ. ನಾಗಯ್ಯನವರ ಕಚೇರಿಯಿತ್ತು. ಅದರಿಂದಾಗಿ ಪ್ರತಿದಿನ ಜಯವಂತಿ ಹಾಡುತ್ತಿದ್ದ ಹಾಡುಗಳೆಲ್ಲ ವಿ. ನಾಗಯ್ಯನವರ ಕಿವಿಗೆ ಬೀಳುತ್ತಿತ್ತು. ಒಂದು ದಿನ ವಿ. ನಾಗಯ್ಯನವರು ರಮಾನಂದರಾಯರನ್ನು ಕರೆಸಿಕೊಂಡರಂತೆ. “ನಿಮ್ಮ ಮಗಳು ಬಹಳ ಸೊಗಸಾಗಿ ಹಾಡುತ್ತಾಳೆ. ಆ ಹುಡುಗಿಯನ್ನು ಎಚ್.ಎಂ.ವಿ.ಕಂಪನಿಗಾಗಿ ಹಾಡಿಸಬಾರದೇಕೆ? ನಾನೇ ಸಂಗೀತವನ್ನು ನಿರ್ದೇಶಿಸುತ್ತೇನೆ” ಎಂದು ಹೇಳಿದರಂತೆ. 1945-46ರ ವೇಳೆಗೆ ವಿ.ನಾಗಯ್ಯನವರ ಸಂಗೀತ ನಿರ್ದೇಶನದಲ್ಲಿ ಜಯವಂತಿದೇವಿಯವರು ಹಾಡಿದ ಎರಡು ಧ್ವನಿಮುದ್ರಿಕೆಗಳು ಹೊರಬಂದವು. ‘ಭಾಗ್ಯದಲಕ್ಷ್ಮೀಬಾರಮ್ಮಾ’ ಹಾಗೂ ‘ಹೂವ ತರುವರ ಮನೆಗೆ ಹುಲ್ಲತರುವ’ ಎರಡು ಧ್ವನಿ ತಟ್ಟೆಗಳು ಜಯವಂತಿದೇವಿಯವರ ಗಾಯನಕ್ಕೆ ಕನ್ನಡಿ ಹಿಡಿದ ಮೊಟ್ಟಮೊದಲ ಸಂಭ್ರಮದ ಘಳಿಗೆಗಳು.
ಕಲಾಪೋಷಕರಾಗಿದ್ದ ವಿ. ನಾಗಯ್ಯನವರು ಜಯವಂತಿಯವರನ್ನು ಮದ್ರಾಸಿನಲ್ಲಿದ್ದ ಆಲ್ ಇಂಡಿಯಾ ರೇಡಿಯೋ ಶಾಖೆಗೂ ಪರಿಚಯಿಸಿದರು. ಅಲ್ಲಿ ಆವರು ಹಿಂದಿ ಭಜನೆಗಳನ್ನು ಹಾಡಲು ಪ್ರಾರಂಭಿಸಿದರು. ವಿ. ನಾಗಯ್ಯನವರು ತಯಾರಿಸಿದ ‘ತ್ಯಾಗಯ್ಯ’ ಮತ್ತು ಉದಯಶಂಕರ್ ಅವರು ತಯಾರಿಸುತ್ತಿದ್ದ ‘ಕಲ್ಪನಾ’ ಹಿಂದಿ ಚಿತ್ರದಲ್ಲೂ ಒಂದೆರಡು ಹಾಡುಗಳನ್ನು ಜಯವಂತಿದೇವಿಯವರು ಹಾಡಿದರು. ಇದಲ್ಲದೆ ಮಹಾತ್ಮಗಾಂಧಿಜಿಯವರ ಪ್ರಾರ್ಥನಾ ಸಭೆಯಲ್ಲೂ ಹಿಂದಿ ಭಜನೆ ಹಾಗೂ ‘ವಂದೇ ಮಾತರಂ’ ಗೀತೆಯನ್ನು ಹಾಡಿದ ಕೀರ್ತಿ ಅವರದು.
1947ರ ಕೊನೆಗೆ ಜಯವಂತಿದೇವಿ ಮದುವೆಯಾಗಿ ಮದ್ರಾಸಿನಿಂದ ಪೂನಾಕ್ಕೆ ಬಂದರು. ಆದರೆ ಆಗ ಪೂನಾದಲ್ಲಿ ‘ಆಕಾಶವಾಣಿ’ ಪ್ರಾರಂಭವಾಗಿರಲಿಲ್ಲವಾದ್ದರಿಂದ ಪ್ರತಿ ತಿಂಗಳೂ ಬೊಂಬಾಯಿ ಆಕಾಶವಾಣಿಯಲ್ಲಿ ಹಾಡಲು ಹೋಗುತ್ತಿದ್ದರು. ಬೊಂಬಾಯಿ ಆಕಾಶವಾಣಿಯಲ್ಲಿ ಇವರು ಕನ್ನಡ, ಕೊಂಕಣಿ, ಹಿಂದಿ ಭಾಷೆಯ ಹಾಡುಗಳನ್ನು ಹಾಡುತ್ತಿದ್ದರು. ಆಕಾಶವಾಣಿಯ ದೆಹಲಿ, ಬೆಂಗಳೂರು, ಬೊಂಬಾಯಿ ಕೇಂದ್ರಗಳು ಏರ್ಪಡಿಸುತ್ತಿದ್ದ ಆಹ್ವಾನಿತ ಶ್ರೋತೃಗಳ ಕಾರ್ಯಕ್ರಮಗಳಲ್ಲಿ ಹಿಂದಿ ಮತ್ತು ಕನ್ನಡ ಗೀತೆಗಳನ್ನು ಹಾಡುತ್ತಿದ್ದರು. ಪೂನಾದಲ್ಲಿ ‘ಆಕಾಶವಾಣಿ’ ಪ್ರಾರಂಭವಾದಾಗ ಅಲ್ಲಿ ಮರಾಠಿ ಗೀತೆಗಳನ್ನು ಹಾಡುವ ಸಂದರ್ಭ ಒದಗಿ ಬಂತು. ಇದರ ಜೊತೆಗೆ ಪೂನಾದಲ್ಲಿದ್ದ ‘ಕರ್ನಾಟಕ ಸಂಘ’ ಹಾಗೂ ‘ಮೈಸೂರು ಅಸೋಸಿಯೇಷನ್’ನವರು ನಡೆಸುತ್ತಿದ್ದ ನಾಡಹಬ್ಬ ಕಾರ್ಯಕ್ರಮಗಳಲ್ಲಂತೂ ಜಯವಂತಿಯವರ ಸಂಗೀತ ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರ್ನಾಟಕದ ಅನೇಕ ಕವಿಗಳು, ಕಲಾವಿದರು ಪೂನಾಕ್ಕೆ ಹೋಗುತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ ಅವರಿಗೆ ಅಲ್ಲಿಗೆ ಬಂದಿದ್ದ ದ.ರಾ. ಬೇಂದ್ರೆಯವರ ಪರಿಚಯವಾಯಿತು.
ಬೇಂದ್ರೆಯವರು ಜಯವಂತಿದೇವಿಯವರಿಗೆ ಕನ್ನಡ ಭಾವಗೀತೆಗಳನ್ನು ಹಾಡಲು ಪ್ರೇರೇಪಣೆ ನೀಡಿದರು. ಬೇಂದ್ರೆಯವರೇ ತಮ್ಮ ಒಂದೆರಡು ಕವನಗಳನ್ನು ಆಯ್ಕೆ ಮಾಡಿ ಹಾಡಲು ಹೇಳಿದ್ದರು. “ಯಾಕೊ ಕಾಣೆ ರುದ್ರವೀಣೆ”, “ವಾರಿನ ಓಟವಾಡತಿತ್ತ ಹೊಳೀಮ್ಯಾಗ” ಇವೆರಡು ಗೀತೆಗಳೂ ಧ್ವನಿ ತಟ್ಟೆಗಳಾಗಿ ಜನಮನದ ಅಂತರಂಗಲ್ಲಿ ನೆಲೆಯಾಗಿ ನಿಂತುಬಿಟ್ಟವು. ಹಾಡುವ ಕಲಾವಿದರು ಯಾರು ಬಂದರೂ ಸರಿಯೇ ಅವರಿಂದ ಹೊಸ ಹೊಸ ಹಾಡುಗಳನ್ನು ಕಲಿಯುವ ತವಕ ಜಯವಂತಿದೇವಿಯವರಿಗೆ. ಹಾಗೇ ಒಮ್ಮೆ ಗುಡಿಬಂಡೆ ರಾಮಾಚಾರ್ಯರು ಪೂನಾಗೆ ಹೋಗಿದ್ದಾಗ ಅವರಿಂದ ಕುವೆಂಪುರವರ ಹಾಡನ್ನು ಕಲಿತರು. ಅವರು ಧ್ವನಿಮುದ್ರಿಸಿರುವ ಕೆ.ಎಸ್. ನರಸಿಂಹಸ್ವಾಮಿಯವರ ಸುಪ್ರಸಿದ್ಧ ಗೀತೆ “ಹತ್ತು ವರುಷದ ಹಿಂದೆ, ಮುತ್ತೂರ ತೇರಿನಲಿ, ಅತ್ತಿತ್ತ ಸುಳಿದವರು ನೀವಲ್ಲವೆ” ಸುಮಾರು 1952ರ ವೇಳೆಗೆ ಎಚ್.ಎಮ್.ವಿ. ಕಂಪೆನಿಯಿಂದ ಬಿಡುಗಡೆಯಾಯಿತು.
ಬೊಂಬಾಯಿ, ಪೂನಾದ ಸಂಗೀತ ಜೀವನ ಜಯವಂತಿ ದೇವಿಯವರ ಬಾಳಿನಲ್ಲಿ ಚಿರಸ್ಮರಣೀಯವಾದ ದಿನಗಳು. ಪೂನಾ ಬಿಟ್ಟು ಜಮ್ಶೆಡ್ಪುರಕ್ಕೆ ಬಂದ ಬಳಿಕ ಅವರ ಸಂಗೀತ ಹಿಂದಿನಂತೆ ಪ್ರಗತಿಯನ್ನು ಪಡೆಯಲು ಸಾಧ್ಯವಾಗಲಿಲ್ಲವೆಂದು ಜಯವಂತಿಯವರು ವಿಷಾದದಿಂದ ಹೇಳುತ್ತಿದ್ದರು. ಆದರೆ ಅಲ್ಲಿ, ಇಲ್ಲಿ, ಆಗೊಮ್ಮೆ, ಈಗೊಮ್ಮೆ, ಗುರುಗಳು, ಮಠಾಧಿಪತಿಗಳ ಸಾನ್ನಿಧ್ಯದಲ್ಲಿ ಹಾಡುತ್ತಿದ್ದರು.
ಕರ್ನಾಟಕದ ಭಾಗಕ್ಕೆ ಬಹಳ ವರ್ಷಗಳ ಹಿಂದೆಯೇ ಎಲೆಮರೆಯ ಹೂವಾಗಿ ಉಳಿದ ಜಯವಂತಿದೇವಿಯವರನ್ನು ಕನ್ನಡ ನಾಡು ಮರೆಯಲಿಲ್ಲ. ಎಲ್ಲೋ ಇದ್ದ ಇವರನ್ನು ಹುಡುಕಿ ಕರೆಸಿ 1996ರಲ್ಲಿ ಸಂಗೀತ ಗಂಗಾ ಸಂಸ್ಥೆಯು ಸಂಗೀತ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಕೊಟ್ಟು ಗೌರವಿಸಿತು. ಆಗಲೇ ಯುವ ಬರಹಗಾರರ ಮತ್ತು ಕಲಾವಿದರ ಬಳಗದವರು ಆಮಂತ್ರಿಸಿ ಗೌರವಿಸಿದ್ದರು. ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ್ ಪ್ರಶಸ್ತಿಯನ್ನು 1997ರಲ್ಲಿ ನೀಡಿ ಗೌರವಿಸಿದ್ದು ಎಲ್ಲದಕ್ಕಿಂತ ಹಿರಿದಾದುದು. ಅದರಲ್ಲೂ ಹೆಚ್ಚಿನ ವಿಷಯವೆಂದರೆ ಸಂತ ಶಿಶುನಾಳ ಶರೀಫರ ಪ್ರಶಸ್ತಿ ಆರಂಭವಾದ ಮೊಟ್ಟ ಮೊದಲ ವರ್ಷವೇ ಅದು ಜಯವಂತಿದೇವಿಯವರಿಗೆ ಸಂದಿತು.
ಜಯವಂತಿ ದೇವಿಯವರಿಗೂ ಕನ್ನಡವೆಂದರೆ ಬಹಳ ಅಭಿಮಾನ. ಅವರ ಪತ್ರ ವ್ಯವಹಾರವೆಲ್ಲ ಕನ್ನಡದಲ್ಲಿಯೇ. ಕೊನೆಯ ದಿನಗಳಲ್ಲಿ ಕೂಡಾ "ನನಗೆ ಶರೀರ-ಶಾರೀರ ಎರಡೂ ಬಳಲಿದೆ. ಹಿಂದಿನಂತೆಯೇ ಇದ್ದಿದ್ದರೆ ಶಿಶುನಾಳ ಶರೀಫರ ಗೀತೆಗಳನ್ನು ಕಲಿತು ಹಾಡುವ ಆಸೆ” ಎನ್ನುತ್ತಿದ್ದ ಅವರ ಮಾತನ್ನು ಕೇಳಿದರೆ ಯಾರಿಗೂ ಹೆಮ್ಮೆ ಎನಿಸದಿರಲಾರದು.
ಜಯವಂತಿ ದೇವಿ ಅವರು 2018 ವರ್ಷದ ಮೇ ತಿಂಗಳಲ್ಲಿ ನಿಧನರಾದರು.
Photo courtesy: www.kamat.com
(ಆಧಾರ: ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿಯ ಕಲಾ ಚೆತನದಲ್ಲಿ ಎಚ್. ಆರ್. ಲೀಲಾವತಿಯವರು ಬರೆದಿರುವ ಲೇಖನ)
On the birth day of great singer Jayavanthi Devi Hirebet
ಕಾಮೆಂಟ್ಗಳು