ವೀಣಾ ಸಹಸ್ರಬುದ್ಧೆ
ವೀಣಾ ಸಹಸ್ರಬುದ್ಧೆ
ವೀಣಾ ಸಹಸ್ರಬುದ್ಧೆ ಹಿಂದೂಸ್ತಾನಿ ಸಂಗೀತದ ಗ್ವಾಲಿಯರ್ ಘರಾಣೆಯ ಮಹತ್ವದ ಗಾಯಕಿ. ಅವರು ಸುಮಧುರ ಆಲಾಪ್, ತಾನ್ಗಳ ಸ್ವರಗುಚ್ಛದೊಂದಿಗೆ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಡುತ್ತಿದ್ದ ಅಪರೂಪದ ಕಲಾವಿದೆ.
ವಿದ್ವಾಂಸರಾಗಿದ್ದ ಹದ್ದೂಖಾನ್, ಹಸ್ಸೂಖಾನ್ ಗ್ವಾಲಿಯರ್ ಘರಾಣೆಯ ಪ್ರವರ್ತಕರು. ಪಂ. ವಿಷ್ಣು ದಿಗಂಬರ್ ಪಲುಸ್ಕರ್, ಪಂ. ಬಾಲಕೃಷ್ಣ ಬುವಾ ಅವರು ಗ್ವಾಲಿಯರ್ ಘರಾಣೆಯನ್ನು ಬಹಳ ಜನಪ್ರಿಯತೆಯತ್ತ ಕೊಂಡೊಯ್ದವರು. ವೀಣಾ ಸಹಸ್ರಬುದ್ಧೆ ಅವರ ಮೇಲೆ ಈ ಎಲ್ಲ ಮಹಾನ್ ಕಲಾವಿದರು ಪ್ರಭಾವ ಬೀರಿದ್ದು, ಗ್ವಾಲಿಯರ್ ಘರಾಣೆಯಲ್ಲಿ ವಿಶ್ವಮಟ್ಟದಲ್ಲಿ ಗುರುತಿಸುವ ಮಟ್ಟಿಗೆ ಬೆಳೆಯುವಂತಾಯಿತು.
ವೀಣಾ ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿ 1948ರ ಸೆಪ್ಟೆಂಬರ್ 14ರಂದು ಜನಿಸಿದರು. ತಂದೆ ಪಂ. ಶಂಕರ ಶ್ರೀಪಾದ ಬೋಡಸ್ ಮತ್ತು ಸಹೋದರ ಪಂ. ಕಾಶಿನಾಥ ಬೋಡಸ್ ಅವರಿಂದ ಸಂಗೀತದ ತಾಲೀಮು ಆರಂಭಿಸಿದರು. ಚಿಕ್ಕ ವಯಸ್ಸಿನಲ್ಲೇ ಸಂಗೀತ ಕಲೆ ಕರಗತವಾಯಿತು. ಜತೆಗೆ ಕಥಕ್ ನೃತ್ಯವನ್ನೂ ಕಲಿತರು. ಪಂ. ವಿಷ್ಣು ದಿಗಂಬರ್ ಪಲುಸ್ಕರ್ ಅವರ ಶಿಷ್ಯರಾದ ವೀಣಾ ಅವರ ತಂದೆ ಶಂಕರ್ ಶ್ರೀಪಾದ್ ಬೋಡಸ್ ಕಾನ್ಪುರದಂತಹ ವ್ಯಾಪಾರೀ ಪಟ್ಟಣದಲ್ಲಿ ನೂರಾರು ಸಂಗೀತಗಾರರನ್ನು ತಯಾರುಮಾಡಿ ಸಂಗೀತೋತ್ಸವಗಳನ್ನು ಏರ್ಪಡಿಸುತ್ತಿದ್ದವರು. ಅವರು ಮಗಳಿಗೆ ‘ಗಾಯಕಿ’ಯ ಸಂಪೂರ್ಣ ಸಾರವನ್ನು ಧಾರೆಯೆರೆದರು. ಸಂಗೀತದ ಕಲೆಯನ್ನು ಸಿದ್ಧಿಸಿಕೊಂಡ ವೀಣಾ ಬಹುಬೇಗ ಖ್ಯಾತಿ ಗಳಿಸಿದರು.
ಕಾನ್ಪುರ ವಿಶ್ವವಿದ್ಯಾಲಯದಿಂದ 1968ರಲ್ಲಿ ಸಂಗೀತದಲ್ಲಿ ಪದವಿ; ಸಂಸ್ಕೃತ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ವೀಣಾ, 1969ರಲ್ಲಿ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಶಾಸ್ತ್ರೀಯ ಸಂಗೀತದಲ್ಲಿ ‘ಅಲಂಕಾರ್’ ಪದವಿ ಪಡೆದರು. 1988ರಲ್ಲಿ ಸಂಗೀತದಲ್ಲಿ ಡಾಕ್ಟರೇಟ್ ಅನ್ನೂ ಪಡೆದು ಪುಣೆಯ ಎಸ್ಎನ್ಡಿಪಿ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದರು. ಆಕಾಶವಾಣಿ 1972ರಲ್ಲಿ ನಡೆಸಿದ ಅಖಿಲ ಭಾರತ ಮಟ್ಟದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ವೀಣಾ ಪ್ರಥಮ ಬಹುಮಾನ ಪಡೆದರು.
ವೀಣಾ ಅವರ ತಂದೆ ಆಗಾಗ ಕಾನ್ಪುರದಲ್ಲಿ ಸಂಗೀತ ಕಛೇರಿ ಏರ್ಪಡಿಸಿ ಹಿರಿಯ ಕಲಾವಿದರನ್ನು ಕರೆಸುತ್ತಿದ್ದರು. ಹೆಚ್ಚಿನ ಕಲಾವಿದರು ವೀಣಾ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಇದರಿಂದಾಗಿ ವೀಣಾ ಹಲವು ವಿದ್ವಾಂಸರ ಸಂಗೀತವನ್ನು ಹತ್ತಿರದಿಂದ ಕೇಳುವಂತಾಯಿತು.
ಜತೆಗೆ ಅವರ ತಂದೆಯವರ ಸಮಕಾಲೀನರಾದ ಪಂ. ವಿನಾಯಕರಾವ್ ಪಟವರ್ಧನ್ ಅವರಿಂದಲೂ ಸಂಗೀತ ಮಾರ್ಗದರ್ಶನ ಪಡೆದರು. ಪಂ. ಬಲವಂತರಾಯ್ ಭಟ್, ಪಂ. ವಸಂತರಾಯ್ ಥಾಕರ್, ಪಂ. ಗಜಾನನ ಬುವಾ ಜೋಶಿ ಇವರಿಂದಲೂ ಸಂಗೀತದ ಶಾಸ್ತ್ರ ಮತ್ತು ಲಯಕಾರಿ ಅಂಶಗಳನ್ನು ಸಿದ್ಧಿಸಿಕೊಂಡರು. ವೀಣಾ ಸಹಸ್ರಬುದ್ಧೆ ಖಯಾಲ್ ಮತ್ತು ಭಜನ್ ಎರಡು ಪ್ರಕಾರಗಳಿಗೂ ರಾಗ ಸಂಯೋಜಿಸಿದ್ದರು. ಅನೇಕ ‘ತರಾನ’ಗಳನ್ನೂ ರಚಿಸಿದ್ದರು. "ಬರೀ ಅರ್ಧ ಗಂಟೆಯಲ್ಲಿ 3–4 ತರಾನ ರಚಿಸಿದೆ. ಇವೆಲ್ಲವೂ ಮನಸ್ಸಿಗೆ ಖುಷಿ ಕೊಡುವಂಥವು. ಅನೇಕ ಕಛೇರಿಗಳಲ್ಲಿ ಇವುಗಳನ್ನು ಹಾಡಿದ್ದೇನೆ. ಯಮನ್, ಭೈರವಿ ರಾಗಗಳ ತರಾನಗಳನ್ನು ಹಾಡಲು ಬಹಳ ಇಷ್ಟವಾಗುತ್ತದೆ..." ಎಂದು ವೀಣಾ ಸಹಸ್ರಬುದ್ಧೆ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ರಾಗಗಳಾದ ಹಂಸಧ್ವನಿ, ಜೋಗ್ ಕೌಂಸ್, ಮುಲ್ತಾನಿ, ಜೋಗ್, ತಿಲಕ್ ಕಾಮೋದ್ ಮುಂತಾದವುಗಳನ್ನು ಬಹಳ ಇಷ್ಟಪಡುತ್ತಿದ್ದ ವೀಣಾ ಈ ರಾಗಗಳಲ್ಲಿ ಸುಪ್ರಸಿದ್ಧ ಖಯಾಲ್ಗಳನ್ನು ಅನೇಕ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ಹಾಡಿದ್ದರು.
ಸಂಜೆಯ ಸುಮಧುರ ರಾಗ ಯಮನ್ನಲ್ಲಿ ತರಾನ, ಭೈರವಿ ರಾಗದ ತರಾನ, ಮೀರಾ ಭಜನ್ಗಳು ವೀಣಾ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ್ದವು. ಇವರ ಭಜನ್ ಮತ್ತು ಖಯಾಲ್ಗಳ ಭಾವಪೂರ್ಣ ಪ್ರಸ್ತುತಿ ಕೇಳುಗರನ್ನು ಆಪ್ತವಾಗಿ ಸೆಳೆಯುತ್ತಿತ್ತು.
ಫ್ಲೈಟ್ಸ್ ಆಫ್ ಮೆಲೊಡಿ– ತರಾನ (1994), ಮಾರ್ನಿಂಗ್ ರಾಗ– ಭೂಪಾಲ್ತೋಡಿ, ವಾಣಿ, ಮಧುವಂತಿ, ಒನ್ ಥೌಸಂಡ್ ಮೈಂಡ್ಸ್... ಮುಂತಾದ ಆಲ್ಬಂಗಳನ್ನು ವೀಣಾ ಸಂಗೀತ ಪ್ರಿಯರಿಗೆ ನೀಡಿದ್ದರು.
ಲಂಡನ್ನ ದರ್ಬಾರ್ ಉತ್ಸವ, ಕೋಪೆನ್ಹೇಗನ್ನಲ್ಲಿ ನಡೆದ ವಿಶ್ವ ಸಂಗೀತೋತ್ಸವ, ಆಕಾಶವಾಣಿ ಸಂಗೀತ ಸಮ್ಮೇಳನ, ಗ್ವಾಲಿಯರ್ನಲ್ಲಿ ತಾನ್ಸೇನ್ ಸಂಗೀತ ಸಮ್ಮೇಳನ, ಸವಾಯಿ ಗಂಧರ್ವ ಉತ್ಸವ ಸೇರಿದಂತೆ ಹಲವು ಪ್ರತಿಷ್ಠಿತ ಉತ್ಸವಗಳಲ್ಲಿ ಹಾಡಿದ ಹೆಗ್ಗಳಿಕೆ ವೀಣಾ ಅವರದ್ದಾಗಿತ್ತು.
1993ರಲ್ಲಿ ಉತ್ತರ ಪ್ರದೇಶದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವೀಣಾ ಅವರಿಗೆ 2003ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿತ್ತು.
ವೀಣಾ ಸಹಸ್ರಬುದ್ಧೆ ಅವರು 2016ರ ಜೂನ್ 29ರಂದು ಈ ಲೋಕವನ್ನಗಲಿದರು.
On the birth anniversary of great musician Veena Sahasrabuddhe
ಕಾಮೆಂಟ್ಗಳು