ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಸವರಾಜ ಸಬರದ


 ಬಸವರಾಜ ಸಬರದ


ಡಾ. ಬಸವರಾಜ ಸಬರದ ಅವರು ಕವಿಯಾಗಿ, ಚಿಂತಕರಾಗಿ, ನಾಟಕಕಾರರಾಗಿ, ಸಾಮಾಜಿಕ ಹೋರಾಟಗಾರರಾಗಿ,  ಹೀಗೆ ಬಹುಮುಖಿಯಾಗಿ ಪ್ರಸಿದ್ಧರು.

ಬಸವರಾಜ ಸಬರದ ಅವರ 1954ರ ಜೂನ್ 20ರಂದು  ಕೊಪ್ಪಳ ಜಿಲ್ಲೆಯ ಕುಕನೂರು ಎಂಬಲ್ಲಿ ಜನಿಸಿದರು. ತಂದೆ ಬಸಪ್ಪ ಸಬರದ.  ತಾಯಿ ಬಸಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಕುಕನೂರಿನಲ್ಲಿ ನಡೆಯಿತು. ಗದಗದ ಜೆ.ಟಿ. ಕಾಲೇಜಿನಿಂದ ಬಿ.ಎ. ಪದವಿ, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. (ಕನ್ನಡ), ಡಿಪ್ಲೊಮ ಇನ್ ಎಪಿಗ್ರಫಿ ಮುಂತಾದ ಪದವಿ ಗಳಿಸಿದರು.   ಜೊತೆಗೆ "ಬಸವೇಶ್ವರ ಮತ್ತು ಪುರಂದರದಾಸರು: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಗಳಿಸಿದರು.

ಬಸವರಾಜ ಸಬರದ ಅವರು ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ ರಾಯಭಾಗ ಆರ್ಟ್ಸ್ ಕಾಲೇಜು, ಕರ್ನಾಟಕ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ, ಔರದ್‌ನ ಅಮರೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ದೀರ್ಘಕಾಲ ಅಧ್ಯಾಪನ ಮಾಡಿದರು.  

ಬಸವರಾಜ ಸಬರದ ಅವರು  ಗುಲಬರ್ಗಾ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ, ಕನ್ನಡ ಅಭ್ಯಾಸ ಮಂಡಳಿ, ಕಲಾನಿಕಾಯದ ಕನ್ನಡ ವಿಭಾಗದ ಸದಸ್ಯತ್ವ, ಪರೀಕ್ಷಾಮಂಡಲಿಯ ಚೇರ್‌ಮನ್, ವಿಶ್ವವಿದ್ಯಾಲಯದ ಅಫಿಲಿಯೇಷನ್ ಕಮಿಟಿ ಚೇರ್‌ಮನ್ ಮುಂತಾದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದರು.

ಬಸವರಾಜ ಸಬರದ ಸಾಮಾಜಿಕ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಅಸ್ಪೃಶ್ಯತಾ ನಿವಾರಣೆ, ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ದಲಿತ-ಬಂಡಾಯ ಚಳವಳಿ ಹೀಗೆ ಹಲವಾರು ಜನಪರ ಹೋರಾಟಗಳಲ್ಲಿ ಸದಾ ಪಾಲ್ಗೊಳ್ಳುತ್ತ ಬಂದಿದ್ದಾರೆ. 

ಬಸವರಾಜ ಸಬರದ ಅವರ ಬರವಣಿಗೆ ಅನೇಕ ತೆರನಾಗಿ ಹರಿದು ಬಂದಿದೆ.  ನನ್ನವರ ಹಾಡು, ಹೋರಾಟ, ಮೂಡಲಕ ಕೆಂಪು ಮೂಡ್ಯಾನ, ನೂರು ಹನಿಗಳು, ದನಿಯೆತ್ತಿ ಹಾಡೇನ, ಬೆಳದಿಂಗಳು ಬಿಸಿಲಾತು, ಗುಬ್ಬಿಯೊಂದು ಗೂಡು ಕಟ್ಯಾದೊ ಮೊದಲಾದವು ಅವರ ಕವನ ಸಂಕಲನಗಳು.  ಪ್ರತಿರೂಪ, ರೆಕ್ಕೆ ಮೂಡಿದಾಗ, ಬೆಳ್ಳಿ, ನರಬಲಿ, ಬೆಳ್ಳಕ್ಕಿ ಸಾಲು, ಬೀದಿ ನಾಟಕಗಳು, ಮತ್ತೊಬ್ಬ ರಾಧೆ, ನಾಕು ಏಕಾಂಕ ನಾಟಕಗಳು ಮುಂತಾದವು ಅವರ ನಾಟಕ ಕೃತಿಗಳಲ್ಲಿ ಸೇರಿವೆ.  ಹೊಸದಿಕ್ಕು, ವಚನ ಚಳುವಳಿ, ಸಾಹಿತ್ಯ ಸಂಗಾತಿ, ಜಾನಪದ, ಅನಂತಮೂರ್ತಿ ಕೃತಿಗಳು, ನಿರಂಜನ ಕೃತಿಗಳು, ವಿಚಾರ ಸಂಪದ, ಶಾಸನಗಳು, ಪ್ರಭುತ್ವ ಮತ್ತು ಜನತೆ, ಸಮುದಾಯ ಮತ್ತು ಸಂಸ್ಕೃತಿ, ಸಾಹಿತ್ಯ ಸಮನ್ವಯ, ಬಂಡಾಯ ಜಾನಪದ, ಕರ್ಮ ಸಿದ್ದಾಂತ  ಮುಂತಾದವು ಅವರು ಸಾಹಿತ್ಯ ಚಿಂತನೆ ಮತ್ತು ವಿಮರ್ಶಾ ಕೃತಿಗಳಲ್ಲಿ ಸೇರಿವೆ. ಬಸವೇಶ್ವರ ಮತ್ತು ಪುರಂದರದಾಸರು, ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವಿಗಳು ಇವರ ಸಂಶೋಧನಾ ಕೃತಿಗಳಾಗಿವೆ.  ದಲಿತ ಸೂರ‍್ಯ, ಕಲ್ಯಾಣನಾಡಿನ ಕೆಂಪು ಕವಿತೆಗಳು, ಶರಣರ ಬಂಡಾಯ ವಚನಗಳು, ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು, ಹೈದರಾಬಾದ್ ಕರ್ನಾಟಕದ ತತ್ವಪದಗಳು, ಹೈದರಾಬಾದ ಕರ್ನಾಟಕದ ರಂಗಭೂಮಿ ಮುಂತಾದವು ಇವರ ಸಂಪಾದನೆಗಳಲ್ಲಿ ಸೇರಿವೆ.  

ಬಸವರಾಜ ಸಬರದ ಅವರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯ ಪುರಸ್ಕಾರ, ಕುವೆಂಪು ಸಾಹಿತ್ಯ ಪುರಸ್ಕಾರ, ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

On the birthday of our writer and scholar Dr. Basavaraja Sabarada

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ