ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ. ಉದಯಕೃಷ್ಣ


 

ಜಿ. ಉದಯಕೃಷ್ಣ

ಜಿ. ಉದಯಕೃಷ್ಣ ಅವರು ಚಿತ್ರ ಕಲಾವಿದರಾಗಿ, ಮೃದಂಗ ವಿದ್ವಾಂಸರಾಗಿ, ಛಾಯಾಗ್ರಾಹಕರಾಗಿ, ಕ್ರೀಡಾಳುವಾಗಿ, ಉದ್ಯಮಿಯಾಗಿ, ಕಾರ್ಯಕ್ರಮ ಸಮನ್ವಯಕಾರರಾಗಿ ಹೀಗೆ ಬಹುಮುಖಿಯಾಗಿ ಸಾಧನೆ ಮಾಡಿದವರು. 

ಏಪ್ರಿಲ್ 6, ಉದಯಕೃಷ್ಣ ಅವರು ಜನಿಸಿದ ದಿನ.   ಕಾಸರಗೋಡು ಜಿಲ್ಲೆಯ ಪೆರ್ಲ ಇವರು ಜನಿಸಿದ ಗ್ರಾಮ. ಪೆರ್ಲ, ಉಡುಪಿ ಮತ್ತು ಮೂಡಬಿದ್ರಿಗಳಲ್ಲಿ ಇವರ ವ್ಯಾಸಂಗ ಸಾಗಿತು.

ಉದಯಕೃಷ್ಣ ಅವರಲ್ಲಿ ಚಿಕ್ಕವಯಸ್ಸಿನಿಂದಲೇ ಚಿತ್ರಕಲೆ ಆಪ್ತ ಹವ್ಯಾಸವಾಗಿ  ಜೊತೆಗೂಡಿತಾದರೂ ಅದಕ್ಕೆ ರೆಕ್ಕೆಗಳು ಮೂಡಿದ್ದು,   ಉಡುಪಿಯ ಎಂಜಿಎಮ್ ಕಾಲೇಜಿಗೆ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಪದವಿ ವ್ಯಾಸಂಗಕ್ಕೆ ಬಂದ ದಿನಗಳಲ್ಲಿ. ಮಹಾನ್ ಕಲಾವಿದ ಜಿ.ಎಸ್. ಶೆಣೈ ಅವರ ಪ್ರಭಾವದಲ್ಲಿ ಇವರ ಪ್ರತಿಭೆ ಅರಳಿತು. ಅಂತರಕಾಲೇಜು ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಇವರಿಗೆ ಬಹುಮಾನಗಳು ಲಭಿಸಿದವು. ವಿಶ್ವವಿದ್ಯಾಲಯ ಮಟ್ಟದಲ್ಲೂ ವಿಜಯಿಯಾಗಿ ಹೆಸರಾದರು. ಮಹಾನ್ ಕಲಾವಿದ ಪಿ. ಆರ್. ತಿಪ್ಪೇಸ್ವಾಮಿ ಅವರ ನೇತೃತ್ವದ ಜ್ಯೂರಿಯ ಮೆಚ್ಚುಗೆಯ ತೀರ್ಪಿನಿಂದ ರಾಜ್ಯಮಟ್ಟದ ಸ್ಫರ್ಧೆಗಳಲ್ಲಿ ವಿಜಯಿಯಾದರು.  1980-84 ಅವಧಿಯಲ್ಲಿನ ಉದಯಕೃಷ್ಣ ಅವರ ಜಯಭೇರಿಗಳಲ್ಲಿ ಮೈಸೂರು ವಿಶ್ವವಿದ್ಯಾಲಯ ನಡೆಸಿದ ಅಂತರ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಸ್ಪಾಟ್ ಪೈಟಿಂಗ್ ಸ್ಫರ್ಧೆಗಳಲ್ಲಿ ಪ್ರಥಮ ಸ್ಥಾನ; ಮೈಸೂರು ವಿಶ್ವವಿದ್ಯಾಲಯ ಏರ್ಪಡಿಸಿದ್ದ ರಾಜ್ಯಮಟ್ಟದ ಸಾಂಸ್ಕೃತಿಕ ಸಮಾವೇಶ ಸಮೂಹಗಾನ ಸ್ಪರ್ಧೆಗಳಲ್ಲಿನ ಪ್ರಥಮ ಬಹುಮಾನಗಳು ಸೇರಿದ್ದವು.  ಕ್ರೀಡೆಗಳಲ್ಲೂ ಮುಂದಿದ್ದ ಉದಯಕೃಷ್ಣ ದಕ್ಷಿಣ ಕನ್ನಡ ಜಿಲ್ಲೆಯ ಅಂತರಕಾಲೇಜು ಸ್ಪರ್ಧೆಗಳಲ್ಲಿ 3 ಬಾರಿ ವಾಲಿಬಾಲ್ ತಂಡದ ನಾಯಕರಾಗಿ ಎರಡು ಬಾರಿ ರನ್ನರ್ ಅಪ್ ತಂಡದ ಪ್ರಧಾನ ಆಟಗಾರರಾಗಿ ಬಹುಮಾನಿತರಾದರು. 

ಮೃದಂಗ ವಾದನ ಉದಯಕೃಷ್ಣ ಅವರ ಕಲಾಜೀವನದಲ್ಲಿ ಮತ್ತೊಂದು ಮಹತ್ವದ ಪಯಣ. ಮಹಾನ್  ವಿದ್ವಾನ್ ಪಾಲ್ಗಾಟ್ ರಘು ಅವರ ಶಿಷ್ಯರಾದ ವಿದ್ವಾನ್ ಪುರುಷೋತ್ತಮ ಪುನಿಂಚತ್ತಾಯ ಅವರ ಶಿಷ್ಯತ್ವದಲ್ಲಿ ಮೃದಂಗ ವಾದನ ಕಲಿತ ಉದಯಕೃಷ್ಣ ಅವರು ಅನೇಕ ಅಂತರ ವಿಶ್ವವಿದ್ಯಾಲಯ ರಾಜ್ಯಮಟ್ಟದ ಸ್ಫರ್ಧೆಗಳಲ್ಲಿ ವಿಜಯಿಯಾದರು. ಗಾಯನ ಸ್ಪರ್ಧೆಗಳಲ್ಲೂ ಅನೇಕ ಬಹುಮಾನ ಗಳಿಸಿದರು.  ಶ್ರೇಷ್ಠ ನಾಟಕ ಪ್ರಶಸ್ತಿ ಪಡೆದ ತಂಡದ ಭಾಗವಾಗಿದ್ದರು. 

ಮುಂದೆ ಬೆಂಗಳೂರಿಗೆ ಬಂದ ಉದಯಕೃಷ್ಣ ಅವರು 1990 ವರ್ಷದಿಂದ 'ಡ್ರೇಪರ್ ಕ್ರಿಯೇಷನ್ಸ್ ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ವಾಣಿಜ್ಯ ವ್ಯವಹಾರ ಬಯಸುವ ಬಹುಮುಖಿ ಅಪೇಕ್ಷೆಗಳ ನಡುವೆಯೂ ಇವರಲ್ಲಿನ ಕಲಾವಂತಿಕೆ ಜೀವಂತವಾಗಿ ಜೊತೆಗೂಡಿತ್ತು. ಕ್ರಮೇಣದಲ್ಲಿ ಇವರ ಸಂಸ್ಥೆ ಬಹುತೆರನಾದ ಜಾಹೀರಾತು ಸೇವೆಗಳಿಗೆ ಹೆಸರಾಯಿತು. ಅನೇಕ ಪ್ರಸಿದ್ಧ ಸಂಸ್ಥೆಗಳು ಮತ್ತು ಉತ್ಪನ್ನಗಳಿಗೆ ಇವರ ಸಂಸ್ಥೆ ಬಹುಮುಖಿ ಸೇವೆ ನೀಡುತ್ತಿದೆ. ಉದಯಕೃಷ್ಣ ಅವರು ಛಾಯಾಗ್ರಾಹಕರಾಗಿಯೂ ಅಪಾರ ಹೆಸರಾಗಿದ್ದಾರೆ. ಉತ್ಪನ್ನಗಳು, ಕೈಗಾರಿಕೆ, ಪೋರ್ಟ್ಫೋಲಿಯೊ, ಫ್ಯಾಷನ್, ಮಾಡೆಲಿಂಗ್, ಮಕ್ಕಳು, ವನ್ಯಜೀವಿ ಹೀಗೆ ಹಲವು ನೂರು ಫೋಟೊ ಶೂಟ್ಗಳನ್ನು ನಿರ್ವಹಿಸಿ ಹೆಸರಾಗಿದ್ದಾರೆ. 
ಸುಮಾರು ಏಳೆಂಟು ಸಾವಿರ ಸ್ಪರ್ಧಿಗಳಿರುವ ಉದಯವಾಣಿ ವಾರ್ಷಿಕ ಮಕ್ಕಳ ಛಾಯಾಚಿತ್ರ ಸ್ಪರ್ಧೆಗಳಲ್ಲಿ,  ಭಾಗವಹಿಸಿದ 6 ವರ್ಷಗಳಲ್ಲಿ 4 ಬಾರಿ ಬಹುಮಾನ ಗೆದ್ದ ಸಾಧನೆ ಇವರದ್ದು. ವಿಡಿಯೋಗ್ರಫಿಯಲ್ಲೂ ಇವರ ಸಾಧನೆಯಿದ್ದು ಅನೇಕ ಸಾಕ್ಷ್ಯಚಿತ್ರಗಳ ನಿರ್ಮಾಣ, ವೆಬ್ ತಂತ್ರಜ್ಞಾನ, ಮಲ್ಟಿಮೀಡಿಯಾ ಮತ್ತು ಸಾಂಸ್ಥಿಕ ಅಧಿವೇಶನಗಳು ಮತ್ತು ಕಾರ್ಯಕ್ರಮಗಳ ವ್ಯವಸ್ಥೆ ನಿರ್ವಹಣೆಗಳಿಗೂ ಇವರು ಹೆಸರಾಗಿದ್ದಾರೆ. ಉದಯಕೃಷ್ಣ ಅವರು ಬೆಂಗಳೂರಿನಲ್ಲಿ ಅನೇಕ ಕಲಾ ಮತ್ತು ಫೋಟೊ ಪ್ರದರ್ಶನಗಳನ್ನು ನಡೆಸಿದ್ದಾರೆ. 

ಉದಯಕೃಷ್ಣ ಅವರು ವಿಶೇಷ ಸಂದರ್ಭಗಳಲ್ಲಿ,  ಅದರಲ್ಲೂ ವಿಶೇಷವಾಗಿ ನೇರ ಸಂಗೀತ ಕಾರ್ಯಕ್ರಮಗಳಲ್ಲಿ 80ಕ್ಕೂ ಹೆಚ್ಚು ಬಾರಿ, ಕ್ಷಿಪ್ರ ಚಿತ್ರರಚನೆಯ ಕೈಚಳಕವನ್ನು ಪ್ರದರ್ಶಿಸಿದ್ದಾರೆ.  2024 ವರ್ಷದಲ್ಲಿ ತಮ್ಮ ಪುತ್ರಿ ನಿಯತಿ ಯು. ಭಟ್ ಅವರ ಜೊತೆಯಲ್ಲಿ 3 ದಿನಗಳ ಕಾಲ ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ಚಿತ್ರಕಲೆ ಮತ್ತು ಛಾಯಾಚಿತ್ರ ಪ್ರದರ್ಶನ ನೀಡಿದರು. 

ಉದಯಕೃಷ್ಣ ಅವರು ಮೃದಂಗವಾದನ ವಿದ್ವಾಂಸರಾಗಿ ಅನೇಕ ಪ್ರಸಿದ್ಧರ ಸಂಗೀತ ಕಛೇರಿಗಳಿಗೆ ಸಹಚರ್ಯೆ ನೀಡುತ್ತಿದ್ದಾರೆ. ಸೋಲೋ ಮೃದಂಗ ವಾದನ ಕಾರ್ಯಕ್ರಮಗಳಿಗೂ ಹೆಸರಾಗಿದ್ದಾರೆ. ಅನೇಕ ಸಾಂಸ್ಕೃತಿಕ ಸಮಾರಂಭಗಳಿಗೆ ಗಣ್ಯ ಅತಿಥಿಯಾಗಿ ಗೌರವಸನ್ಮಾನಗಳನ್ನು ಗಳಿಸಿದ್ದಾರೆ.  ಅನೇಕ ಸಭಾಗಳು ಮತ್ತು ಸಾಂಸ್ಕೃತಿಕ ವೇದಿಕೆಗಳಿಗಾಗಿ ಕಾರ್ಯಕ್ರಮ ನಿಯೋಜಿಸಿದ್ದಾರೆ. ಇವರು ಪಲ್ಲವ ಸಾಂಸ್ಕೃತಿಕ ವೇದಿಕೆ, ಅಭ್ಯಾಸ ಕುಂಜ ಕಲಾ ಪ್ರತಿಷ್ಟಾನಗಳಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.  ಶ್ರೀ ರಾಮಚಂದ್ರ ಮಠದ ವಲಯ ಉಪಾಧ್ಯಕ್ಷರಾಗಿಯೂ ಇವರ ಸೇವೆ ಸಂದಿದೆ. ವಿಶ್ವ ಹವ್ಯಕ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಧಾನ ನಿರ್ವಾಹಕರಾಗಿ ಮತ್ತು ಮೃದಂಗ ಕಲಾವಿದರಾಗಿ ಭಾಗಿಯಾಗಿದ್ದಾರೆ.

ಬಹುಮುಖಿ ಸಾಧಕರಾದ ಸಹೃದಯಿ ಜಿ. ಉದಯಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. 

Happy birthday to Multifaceted achiever Uday Krishna G 🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ