ಲಾಲ್ ಕೃಷ್ಣ ಅಡ್ವಾಣಿ
ಲಾಲ್ ಕೃಷ್ಣ ಅಡ್ವಾಣಿ
ಲಾಲ್ ಕೃಷ್ಣ ಅಡ್ವಾಣಿ ಅವರು ತಾವು ರಾಜಕೀಯಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದವರು. “ಆಶಾವಾದಿಯಾಗಿದ್ದರೆ ಮಾತ್ರ ಸಾಧನೆ ಸಾಧ್ಯ. ಸಾಧನೆಯ ಗುರಿ ಸ್ಪಷ್ಟವಾಗಿರಬೇಕು. ಕೆಲಸದಲ್ಲಿ ಬದ್ಧತೆ ಮೈಗೂಡಿಸಿಕೊಳ್ಳಬೇಕು. ಭದ್ರ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತವನ್ನು ಮುನ್ನಡೆಸಲು ಎಲ್ಲರೂ ಪಣ ತೊಡಬೇಕು. . . “ ಇದು ಅಡ್ವಾಣಿಯವರು ಆಗಾಗ ಹೇಳುತ್ತಿದ್ದ ಮಾತು. ಅವರಿಗೀಗ ವಯಸ್ಸು 96 ತುಂಬಿತು. ಅವರ ಅಪಾರವಾದ ರಾಜಕೀಯ ಸಾಧನೆ, ಅವರ ತಲೆ ಕೆಡಿಸಿಲ್ಲ. ಅವರ ರಾಜಕೀಯದ ಸೋಲುಗಳು ಅವರನ್ನು ನಿರಾಶರನ್ನಾಗಿ ಮಾಡಿರಲಿಲ್ಲ! ಕಳೆದ ದಶಕದಲ್ಲಿ, ತಾವು ಕಟ್ಟಿದ ಪಕ್ಷ ತಮ್ಮನ್ನು ಮೂಲೆಗಿಟ್ಟಿತು ಎಂಬುದು ಅವರನ್ನು ವಿಚಲಿತರನ್ನಾಗಿಸಿತು ಎಂಬುದಂತೂ ನಿಜ. ಅವರು ಅದನ್ನು ಮುಚ್ಚಿಟ್ಟವರೂ ಅಲ್ಲ. ಹಾಗೆಂದು ಅದನ್ನೇ ತಮ್ಮ ಪ್ರತಿ ಗಳಿಗೆಯ ಪ್ರಲಾಪವನ್ನು ಮಾಡಿಕೊಂಡು ಸುದ್ಧಿ ಮಾಧ್ಯಮಗಳಿಗೆ ತಮ್ಮ ಮನೆ ಬಾಗಿಲನ್ನು ಆಕರ್ಷಕವೆನಿಸುವಂತೆ ಮಾಡಿದವರೂ ಅಲ್ಲ.
1927ರ ನವೆಂಬರ್ 8ರಂದು ಅಂದಿನ ಭಾರತದ ಭಾಗವಾಗಿದ್ದ ಸಿಂದ್ ಪ್ರದೇಶದ ಗೋರೆಗಾಂವ್ ಗ್ರಾಮದಲ್ಲಿ ಜನಿಸಿದ ಅಡ್ವಾಣಿಯವರು, ಕರಾಚಿಯ ಶಾಲೆಗಳಲ್ಲಿ ಓದಿ ಮುಂದೆ ಮುಂಬೈ ವಿಶ್ವವಿದ್ಯಾಲಯದ ಪದವಿ ಪಡೆದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯದರ್ಶಿಯಾಗಿದ್ದರು. 1951ರಲ್ಲಿ ಅವರು ಶ್ಯಾಮ್ ಪ್ರಕಾಶ್ ಮುಖರ್ಜಿಯವರು ಸ್ಥಾಪಿಸಿದ ಜನಸಂಘಕ್ಕೆ ಸೇರಿದರು. ಅಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿ 1975ರ ವೇಳೆಗೆ ಆ ಪಕ್ಷದ ಅಧ್ಯಕ್ಷರೇ ಆದರು. ಜಯಪ್ರಕಾಶ್ ನಾರಾಯಣ್ ಅವರ ಕರೆಗೆ ಓಗೊಟ್ಟ ಜನಸಂಘ ಮುಂದೆ ಜನತಾಪಕ್ಷಕ್ಕೆ ಬಂತು. ಜನತಾಪಕ್ಷ ಒಡೆದು ಹೋಳಾದಾಗ ಭಾರತೀಯ ಜನತಾ ಪಕ್ಷ ಸ್ಥಾಪಿಸಿದರು.
ರಾಜಕೀಯದಲ್ಲಿ ಮಂತ್ರಿಯಾಗಿ, ಉಪಪ್ರಧಾನಿಯಾಗಿ ಅಡ್ವಾಣಿ ಕಾರ್ಯ ನಿರ್ವಹಿಸಿದ್ದಾರೆ. ಒಬ್ಬ ಭಾಷಣಕಾರನಾಗಿ, ಒಬ್ಬ ಚಿಂತಕನಾಗಿ ಅವರು ನಮ್ಮ ಕಾಲದ ಯುವ ಜನರನ್ನು ಸಾಕಷ್ಟು ಗಮನ ಸೆಳೆದಿದ್ದಾರೆ. ಅವರ ಆತ್ಮಕಥೆಯ ಹೆಸರು ‘ನನ್ನ ದೇಶ ನನ್ನ ಜೀವನ’ ಕುರಿತು ಅವರು ಆಡುವ ಮಾತು ಹೀಗಿದೆ. “ಆತ್ಮ ಕಥೆಗಳಲ್ಲಿ ಸಾಮಾನ್ಯವಾಗಿ ‘ನಾನು’ ಎಂಬ ಸಂಬೋಧನೆ ಹೆಚ್ಚಿರುತ್ತದೆ. ಆದರೆ, ನಾನು ದೇಶವನ್ನು ಮೊದಲ ಸ್ಥಾನದಲ್ಲಿ ಕಂಡಿದ್ದೇನೆ. ಈ ‘ನನ್ನತನ’ ವನ್ನು ನನ್ನಿಂದ ದೂರ ಮಾಡಿದ್ದು ಮತ್ತು ಎಲ್ಲಕ್ಕಿಂತ ಮೊದಲು ದೇಶ ಎಂಬ ಪ್ರೀತಿಯನ್ನು ನನ್ನಲ್ಲಿ ಹುಟ್ಟಿಸಿದ್ದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು”. ಹೀಗೆ ಹಲವು ರೀತಿಯಲ್ಲಿ ಅವರದು ತಮ್ಮ ಹಿರಿಯ ಪರಂಪರೆಗೆ ಗೌರವ ನೀಡುವ ವ್ಯಕ್ತಿತ್ವ. ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಅವರ ಸ್ನೇಹ ಮತ್ತು ಒಡನಾಡಿತನ ಅವರಿಬ್ಬರ ರಾಜಕೀಯ ಜೀವನದಲ್ಲೂ ಮಹತ್ವದ ಅಂಶವಾಗಿದೆ. ಎಲ್ಲ ವಿಚಾರದಲ್ಲೂ ಶಿಸ್ತು ಹಿರಿಯ ವಯಸ್ಸಿನಲ್ಲೂ ಅವರ ಉತ್ತಮ ಆರೋಗ್ಯದಲ್ಲಿರುವ ಗುಟ್ಟು.
ಅಡ್ವಾಣಿಯವರು ನಿರಂತರ ರಥಯಾತ್ರಿ. ರಾಮನಿಗೋಸ್ಕರ, ಜನಾದೇಶಕ್ಕೋಸ್ಕರ, ಸ್ವರ್ಣ ಜಯಂತಿಗಾಗಿ, ಭಾರತ ಉದಯಕ್ಕಾಗಿ, ಭಾರತ ಸುರಕ್ಷೆಗಾಗಿ, ಜನ ಚೇತನಕ್ಕೆ ಹೀಗೆ ಬಗೆ ಬಗೆಯ ಹೆಸರಿನಲ್ಲಿ ಆರು ಬಾರಿ ಅವರು ಇಡೀ ದೇಶವನ್ನು ಸುತ್ತಿದ್ದಾರೆ. ಹೀಗಾಗಿ ದೇಶದ ನಾಡಿ ಮಿಡಿತ ಅವರಿಗೆ ಗೊತ್ತಿದೆ. ಇಷ್ಟೆಲ್ಲಾ ಯಾತ್ರೆ ಮಾಡಿದ್ದರೂ ರಥದ ಹಿಂದೆ ಬಂದವರೆಲ್ಲಾ, ತಮ್ಮ ಭಾಷಣಕ್ಕೆ ಬಂದವರೆಲ್ಲಾ ತಮ್ಮನ್ನು ಬೆಂಬಲಿಸುತ್ತಾರೆ ಎಂಬ ಆಶೆಯೇನೂ ಅವರಲ್ಲಿ ಮನೆ ಮಾಡದೆ, ಆ ಕ್ಷಣಕ್ಕೆ ತನಗೇನು ತೋಚುತ್ತದೋ ಅದನ್ನು ಮಾಡಿದ್ದಾರೆ.
ರಾಮನಿಗಾಗಿ ಅವರು ಮಾಡಿದ ಯಾತ್ರೆಯನ್ನು ಪರಧರ್ಮೀಯರು ವಿರೋಧಿಸುವುದು, ಅವರ ರಾಜಕೀಯ ಚಿಂತನೆಗಳನ್ನು ಎಡಪಕ್ಷೀಯರು – ಕಾಂಗ್ರೆಸ್ಸಿಗರು ವಿರೋಧಿಸುವುದು ಮಾತ್ರವಲ್ಲ, ಅವರ ಜಿನ್ನಾ ಕುರಿತ ಕೆಲವೊಂದು ಮಾತುಗಳು ಮತ್ತು ಹಲವು ರಾಜಕೀಯ ನಿಲುವುಗಳನ್ನು ಅವರ ಆರ್. ಎಸ್. ಎಸ್ ಮತ್ತು ಭಾರತೀಯ ಜನತಾ ಪಕ್ಷ ಕೂಡಾ ವಿರೋಧಿಸಿದ್ದುಂಟು. ನರೇಂದ್ರ ಮೋದಿಯವರು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ವಿಚಾರದಲ್ಲಿ ಸಹಾ ಅವರ ಬಹಿರಂಗ ಅಭಿವ್ಯಕ್ತಿಗಳ ಬಗ್ಗೆ ಸಾಕಷ್ಟು ಕೋಲಾಹಲ ನಡೆದದ್ದಿದೆ. ಕೆಲವು ವರ್ಷಗಳ ಹಿಂದೆ ತುರ್ತುಪರಿಸ್ಥಿತಿಯಂತಹ ದಿನಗಳು ಮತ್ತೊಮ್ಮೆ ಸನ್ನಿಹಿತಹಿತವಾಗುತ್ತಿವೆ ಎಂಬ ತಮ್ಮ ಅಭಿಪ್ರಾಯ ಬೆಲೆಕಳೆದುಕೊಂಡ ಭಾವವನ್ನು ಅಡ್ವಾಣಿ ಹೊರಹಾಕಿದವರು. ಹೀಗಾಗಿ ಅವರು ಎಲ್ಲರನ್ನೂ ಮೆಚ್ಚಿಸಲೇಬೇಕೆಂದು ಮಾತಾಡುವುದಿಲ್ಲ. ಅವರಿಗೆ ತಮಗೆ ಅನ್ನಿಸಿದ್ದನ್ನು ನೇರವಾಗಿ ನುಡಿಯುವ ಅಂತರ್ಯವಿದೆ ಎಂದು ಅವರನ್ನು ಮೆಚ್ಚುವ ಜನ ಕೂಡಾ ಸಾಕಷ್ಟಿದ್ದಾರೆ.
ಸ್ವಾತಂತ್ರ್ಯಾನಂತರದ ಭಾರತದ ರಾಜಕೀಯ ಜೀವನದಲ್ಲಿ, ಎಲ್ಲಾ ಆಗು ಹೋಗುಗಳನ್ನೂ ಖುದ್ದು ಕಂಡು ಅನುಭಾವಿಸಿರುವ ಅಡ್ವಾಣಿ ಅವರಿಗೆ ಅವರು ಯಾವ ಒಂದು ಶುದ್ಧತೆಯನ್ನು
ವಿರೋಧಪಕ್ಷದಲ್ಲಿದ್ದು ಆಡಳಿತ ಪಕ್ಷದಿಂದ ನಿರೀಕ್ಷಿಸಿದ್ದರೋ; ತಮ್ಮ ಅಧಿಕಾರಾವಧಿಯಲ್ಲಿ ಅದನ್ನು ಹೀಗೆ ಪ್ರಯತ್ನಿಸಿ ಎಂದು ತಮ್ಮ ಕಿರಿಯರಿಗೆ ಹೇಳುತ್ತಿದ್ದರೋ; ಅಂತಹ ಮಾತುಗಳು ಮುಂದೆ ತಮ್ಮದೇ ಪಕ್ಷದ ಮುಂದಿನ ತಲೆಮಾರಿಗೆ ಹಿತವಾಗಲಿಲ್ಲ ಎಂಬ ಅರಿವು ಅಡ್ವಾಣಿ ಅವರನ್ನು ಸಾಕಷ್ಟು ಕಾಡಿತ್ತು. ಕಳೆದ ದಶಕದಲ್ಲಿ ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ತಮ್ಮ ಪಕ್ಷದ ಬಗ್ಗೆ ಅವರು ಮಾಡಿದ ಭಾಷಣದಲ್ಲಿ “ಬೇರೆ ಪಕ್ಷದ ಭ್ರಷ್ಟಾ ಚಾರ ಮಾತ್ರವಲ್ಲ, ನಮ್ಮ ಪಕ್ಷದವರ ಭ್ರಷ್ಟಚಾರವನ್ನು ಕೂಡಾ ನಾನು ಸಹಿಸುವುದಿಲ್ಲ” ಎಂದು ನುಡಿದದ್ದು, ಬಹುಶಃ ಅವರ ರಾಜಕೀಯದಲ್ಲಿ ಅವರೆಂದೂ ಆಡಲು ಕನಸದಿದ್ದ ಮಾತುಗಳಿರಬೇಕು.
2014ರಲ್ಲಿ ನಡೆದ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರಿಗೆ ದೊರೆತ ಬೆಂಬಲದ ಹಿನ್ನೆಲೆಯಲ್ಲಿ ಅಡ್ವಾನಿ ಅವರು ತಾವೇ ಸೌಜನ್ಯಯುತವಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬಹುದಿತ್ತು ಎಂದು ಬಹಳಷ್ಟು ಅಭಿಪ್ರಾಯಗಳಿವೆ. ಜೀವನ ಪರ್ಯಂತ ಸಾರ್ವಜನಿಕ ಸೇವೆಯಲ್ಲಿ ಭಾಗಿಯಾಗಿ ಸದಾ ಮುನ್ನಡೆದ ಒಬ್ಬ ವ್ಯಕ್ತಿಗೆ ಮಾನಸಿಕವಾಗಿ ಹಿಂದೆ ಹೆಜ್ಜೆ ಇಡಬೇಕೆನ್ನುವುದು ಅಷ್ಟೊಂದು ಸುಲಭಸಾಧ್ಯವಲ್ಲ. ಅನಿವಾರ್ಯತೆಯನ್ನು ಒಪ್ಪಿಕೊಂಡ ನಂತರದಲ್ಲಿ ಅವರು ಆದಷ್ಟೂ ಸಹಜತೆಯಲ್ಲಿದ್ದಾರೆ ಎನ್ನುವುದು ಕೂಡಾ ಅಡ್ವಾನಿ ಅವರು ಹಿರಿತನದ ಸಾಮರ್ಥ್ಯದ ಒಂದು ಭಾಗವೇ ಆಗಿದೆ.
ಅಡ್ವಾಣಿ ಅವರನ್ನು ರಾಷ್ಟ್ರಪತಿಗಳನ್ನಾಗಿಸುವುದು ಅವರ ಪಕ್ಷಕ್ಕೆ ಕಷ್ಟವಿರಲಿಲ್ಲ. ಅಡ್ವಾಣಿ ಅಂತಹ ಕಟ್ಟುನಿಟ್ಟಿನ ವ್ಯಕ್ತಿಯನ್ನು ರಬ್ಬರ್ ಸ್ಟಾಂಪ್ ಆಗಿ ಬಳಸುವುದು ಸಾಧ್ಯವಿಲ್ಲದ ಮಾತು ಹಾಗಾಗಿ ಅವರನ್ನು ರಾಷ್ಟ್ರಪತಿಗಳನ್ನಾಗಿ ಕೂರಿಸಿಕೊಳ್ಳುವುದು ಆಳುವ ಪಕ್ಷಕ್ಕೆ ಎಷ್ಟು ಕಷ್ಟವಿತ್ತು ಎಂಬುದು ಊಹಿಸಲು ಸಾಧ್ಯವಾಗದ ವಿಚಾರವೇನಲ್ಲ. ಹೀಗೆ ಅಪೇಕ್ಷಿತವಾಗಾಗಲಿ, ಅನಪೇಕ್ಷಿತವಾಗಾಗಲಿ ಎಲ್. ಕೆ. ಅಡ್ವಾಣಿ ಅವರು ಕಳೆದ ಶತಮಾನದ ಪ್ರತಿಷ್ಠಿತ ರಾಜಕಾರಣಿಗಳ ಸಾಲಿನಲ್ಲಿ ಎದ್ದುಕಾಣುವವರು ಹಾಗೂ ಮೌಲ್ಯರಾಜಕಾರಣದ ಬಗ್ಗೆ ಚಿಂತಿಸುವವರಿಗೆ ನೆನಪಾಗುವವರು ಎಂಬುದರಲ್ಲಂತೂ ಸಂದೇಹವಿಲ್ಲ.
“ಕಣ್ಣಿದ್ದೂ ಕುರುಡಾಗಿರುವ ಸಮಾಜ, ಅಡ್ವಾಣಿ ಅಂತಹ ವ್ಯಕ್ತಿತ್ವವನ್ನು ವಿಶಾಲ ವ್ಯಾಪ್ತಿಯಲ್ಲಿ ಕಾಣುವುದು ಕಷ್ಟ.” - ಇಂದು ಅಡ್ವಾಣಿ ಅವರು ತಮ್ಮ 96ನೇ ಜನ್ಮದಿನವನ್ನು ಆಚರಿಸುತ್ತಿದ್ದು, ಪ್ರತೀ ವರ್ಷ ತಮ್ಮ ಹುಟ್ಟು ಹಬ್ಬವನ್ನು ಕುರುಡು ಮಕ್ಕಳೊಂದಿಗೆ ಆಚರಿಸಿಕೊಳ್ಳುತ್ತಾರೆ ಎಂದು ನೆನೆದಾಗ ಮನದಲ್ಲಿ ಹಾದುಹೋಗುವ ಭಾವವಿದು. ಅವರ ಹಿರಿತನದ ಬದುಕು ಸುಂದರವಾಗಿರಲಿ.
On 96th birth day of great poltician of our times L. K. Advani
ಕಾಮೆಂಟ್ಗಳು