ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆತ್ರಾಡಿ ಸುರೇಶ ಹೆಗ್ಡೆ


 ಆತ್ರಾಡಿ ಸುರೇಶ ಹೆಗ್ಡೆ


ಆತ್ರಾಡಿ ಸುರೇಶ ಹೆಗ್ಡೆ ನಮ್ಮ ನಡುವಿನ ಪ್ರಾಜ್ಞ ಚಿಂತಕರು ಮತ್ತು ಬರಹಗಾರರು.

ಜುಲೈ 16, ಸುರೇಶ ಹೆಗ್ಡೆ ಅವರ ಜನ್ಮದಿನ. 
ತಂದೆ ಡಾ. ಯು. ಚಂದ್ರಶೇಖರ. ತಾಯಿ ಅಂಬಾ.  ಉಡುಪಿ – ಪೆರ್ಡೂರು – ಹೆಬ್ರಿ – ಆಗುಂಬೆ ರಸ್ತೆಯಲ್ಲಿ ಉಡುಪಿಯಿಂದ  ಪೂರ್ವಕ್ಕೆ ಹತ್ತು ಕಿ.ಮೀ. ದೂರದಲ್ಲಿರುವ ಆತ್ರಾಡಿ ಇವರ ಊರು.

ಸುರೇಶ ಹೆಗ್ಡೆ ಅವರು ಎರಡು ದಶಕಗಳ ಕಾಲ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದರು.  ಈ ಅವಧಿಯಲ್ಲಿ ಅವರು, 
ಬೆಂಗಳೂರು, ಪಂಜಾಬಿನ  ಪಠಾನ್ಕೋಟ್ ಹರ್ಯಾಣಾದ ಅಂಬಾಲಾ ಮತ್ತು ಉತ್ತರ ಪ್ರದೇಶದ ಗೋರಖಪುರ ಸೇರಿದಂತೆ ವಿವಿಧಡೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಮುಂದೆ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು ಖಾಸಗಿ ಸೇವೆಯಲ್ಲಿ ವೃತ್ತಿ ಮತ್ತು ಆಂತರಿಕ ನೆಲೆಗಳ ಒಲವಿನ ಪ್ರವೃತ್ತಿಗಳಲ್ಲಿ ತೊಡಗಿದ್ದಾರೆ. 

ಆತ್ರಾಡಿ ಸುರೇಶ ಹೆಗ್ಡೆ ಅವರು ತಮ್ಮ ಹದಿನೈದರ ವಯಸ್ಸಿನಲ್ಲೇ ಬರೆವಣಿಗೆಯನ್ನು ಆರಂಭಿಸಿದರು. ಕನ್ನಡ ಅವರ ಪ್ರೀತಿ. ತಮ್ಮ ಬರೆವಣಿಗೆಯ ಮೂಲಕ ತಮ್ಮ ಮನದಲ್ಲಿ ಮೂಡುವ ಸ್ಪಂದನ ಪ್ರತಿಸ್ಪಂದನಗಳಿಗೆ ಮಾತು ಕೊಡುವ ಅವರ ಈ ಕೆಲಸ ನಿರಂತರವಾಗಿ ಸಾಗುತ್ತಿದೆ. ಹೀಗಾಗಿ ಅವರ ಪ್ರಸಿದ್ಧ ಬ್ಲಾಗಿನ ಹೆಸರು 'ಆಸುಮನ'. ಇವರ ಬರಹಗಳು ಪತ್ರಿಕೆಗಳಲ್ಲೂ ಮೂಡಿಬರುತ್ತಿವೆ. ರಾಜಕೀಯ, ಪತ್ರಿಕೋದ್ಯಮ, ಅಧ್ಯಾತ್ಮ, ಪ್ರಚಲಿತ ವಿದ್ಯಮಾನ, ಮಾನವೀಯತೆ ಉಳ್ಳ ಸಹೃದಯರೊಂದಿಗಿನ ಸ್ನೇಹ, ಪರೋಪಕಾರ ಹೀಗೆ ಅವರ ಮನದ ಆಸಕ್ತಿಗಳು ಸರ್ವವ್ಯಾಪಿ.

'ಆಸುಮನ' ಬ್ಲಾಗಿನ ಮೊದಲ 'ಭಾವಾಭಿವ್ಯಕ್ತಿ' ನಮ್ಮನ್ನು ಹೀಗೆ ಸ್ವಾಗತಿಸುತ್ತದೆ...

ಸಖೀ,
ಮಾತಾದರೇನು
ಮೌನವಾದರೇನು
ಭಾವಾಭಿವ್ಯಕ್ತಿ ಮುಖ್ಯ;
ತಮ್ಮ ವೈಫಲ್ಯಕ್ಕೆ
ಅನ್ಯರನು ದೂರಿದರೆ
ಮುರಿದೀತು ನಡುವಿನ ಸಖ್ಯ!

ನಾನು ಆತ್ರಾಡಿ ಸುರೇಶ ಹೆಗ್ಡೆ ಅವರೊಂದಿಗಿದ್ದ ಕೆಲವು ಕ್ಷಣಗಳಲ್ಲಿ ಕಂಡದ್ದು ಅವರ ಮನ ಪಂಚಾಂಗ ಗಣಿತದಲ್ಲಿ ಕೂಡ ಪಾರಂಗತ.  ಒಮ್ಮೆ ಹಿರಿಯರೊಬ್ಬರ ಕುರಿತು ಮಾತಾಡುವಾಗ "ನಾನು ಬರೆದ‍ ಲೇಖನದಲ್ಲಿ ಹಾಕಿದ ದಿನ ಸರಿ ಅಲ್ಲವಂತೆ,  ಅವರು ಹುಟ್ಟಿದ್ದು ಆ ವರ್ಷದ 'ಹೋಳಿ' ಹಬ್ಬದ ದಿನವಂತೆ" ಅಂದೊಡನೆಯೇ ತಕ್ಷಣವೇ ಹಾಗಿದ್ದರೆ ಅವರು ಹುಟ್ಟಿದ ದಿನಾಂಕ ...  ಅಂತ ನಿರ್ದಿಷ್ಟವಾಗಿ ಹೇಳಿದರು. ತಾವು ಹುಟ್ಟಿದ ದಿನಾಂಕವನ್ನೂ ಸುರೇಶರು  ".... ವರ್ಷ ಕರ್ಕಾಟಕ ಸಂಕ್ರಮಣ ದಿನವಾದ ಸೋಮವಾರದಂದು, ೦೩.೩೬ ಘಂಟೆಗೆ" ಎಂದು ಬರೆದಿದ್ದಾರೆ.  

ನನಗಂತೂ ಇದೆಲ್ಲ ತಲೆಗೆ ಹೋಗಲ್ಲ.  ತಾವು ಅವರನ್ನು ಸಂಪರ್ಕಿಸುವುದಾದರೆ ಹೀಗೆ ಪ್ರಯತ್ನಿಸಿನೋಡಿ:

ಕೊನೆಯ ಅಂಕಿಯನು ಬರೆದು,
ಅದರಲ್ಲೆರಡನ್ನು ಕಳೆದು,
ಮತ್ತೆ ನಾಲ್ಕನ್ನು ತೆಗೆದು,
ಎರಡು ಮೆಟ್ಟಿಲಿಳಿದು,
ಶೂನ್ಯವನು ಹಿಡಿದು,
ಆರಕ್ಕೇರಿ,
ಒಂದಕ್ಕಿಳಿದು,
ಎರಡು ಮೆಟ್ಟಿಲು ಏರಿ,
ಒಂದು ಹೆಜ್ಜೆ ಹಿಂತೆಗೆದು,
ಒಂದು ಕೈಯೆಲ್ಲಾ ಬೆರಳುಗಳ ಲೆಕ್ಕಿಸಿ ಬರೆದಾಗ,
ಸಿಗುವ ಹತ್ತಂಕಿಯ ಸಂಖ್ಯೆಗೆ ಕರೆಮಾಡಿ.

ಸ್ವಾಮಿ 'ಆಸುಮನ' ನಿಮ್ಮ ವಿಶಾಲ ಪ್ರತಿಭೆಗೆ ದೊಡ್ಡ ನಮನ. ಜೊತೆಗೆ ಈ ಸುಂದರ ಪ್ರತಿಭಾನ್ವಿತ 'ಆಸುಮನ'ದೊಡೆಯ ಲೋಕಪ್ರಿಯರಾದ ಆತ್ರಾಡಿ ಸುರೇಶ ಹೆಗ್ಡೆ ಅವರೆ, ತಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Athradi Suresh Hegde 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ