ಜ್ಯೋತಿ ಗುರುಪ್ರಸಾದ್
ಜ್ಯೋತಿ ಗುರುಪ್ರಸಾದ್
ಕನ್ನಡ ಮತ್ತು ಇಂಗ್ಲಿಷ್ ಅಧ್ಯಾಪನ ವೃತ್ತಿಯಲ್ಲಿರುವ ಜ್ಯೋತಿ ಗುರುಪ್ರಸಾದ್ ಅವರು ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ಜ್ಯೋತಿ ಅವರು 1965ರ ಜುಲೈ 16ರಂದು ಜನಿಸಿದರು. ತಂದೆ ಆರ್.ರಂಗನಾಥನ್ ಸೈನ್ಯದಲ್ಲಿ ಸೇವೆಯಲ್ಲಿದ್ದರು. ತಾಯಿ ಪುಷ್ಪವಲ್ಲಿ ಮನೆ ಮುಂದೆ ಚೆಂದಕ್ಕೆ ರಂಗೋಲಿ ಹಾಕುತ್ತಿದ್ದ, ದೇವರ ನಾಮ ಹಾಡುತ್ತಿದ್ದ, ಶುದ್ಧ ಭಕ್ತಿಯಿದ್ದ ಗೃಹಿಣಿ. ಜ್ಯೋತಿ ಅವರು ಹುಟ್ಟಿದ್ದು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ. ಅಲ್ಲಿಯೇ ಅವರ ವಿದ್ಯಾಭ್ಯಾಸದ ಬಹುಭಾಗ ನಡೆಯಿತು. ಬಿ.ಕಾಂ, ಇಂಗ್ಲಿಷ್ ಎಂ.ಎ. ಮತ್ತು ಕನ್ನಡ ಎಂ.ಎ ಓದಿದ್ದಾರೆ.
ಜ್ಯೋತಿ ಅವರು ಕಾರ್ಕಳದ ಸುತ್ತಲಿನ ಅನೇಕ ಸಂಸ್ಥೆಗಳಲ್ಲಿ 1998 ರಿಂದಲೂ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಶಿಕ್ಷಕಿಯಾಗಿ ಉಪನ್ಯಾಸಕಿಯಾಗಿ ದುಡಿದಿದ್ದು, ಪ್ರಸಕ್ತದಲ್ಲಿ ಕಾರ್ಕಳದ ಶಿರ್ಡಿ ಸಾಯಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರೇಡಿಯೋ ಕೇಳುವುದು, ಹಳೆಯ ಹಾಡುಗಳನ್ನು ಕಲಿಯುವುದು ಜ್ಯೋತಿ ಅವರ ತಾಯಿಯವರ ಹವ್ಯಾಸವಾಗಿತ್ತು. ಅದು ಜ್ಯೋತಿ ಅವರಿಗೂ ಹವ್ಯಾಸವಾಗಿ ಒಲಿದು, ಆಕಾಶವಾಣಿ ಇಂದು ಅವರ ಒಂದು ಭಾಗವೇ ಆಗಿಹೋಗಿದೆ. ಭಾವಗೀತೆ ಕೂಡ ಹಾಡುತ್ತಾರೆ. ಅಭಿನಯ ಕಲೆಯಲ್ಲಿ ಒಲವಿದ್ದ ಇವರು ಶಾಲಾ ಕಾಲೇಜು ದಿನಗಳಲ್ಲಿ ನಾಟಕ ಮತ್ತು ಏಕಪಾತ್ರಾಭಿನಯಗಳಲ್ಲಿ ಭಾಗಿಯಾಗುತ್ತಿದ್ದರು. ಚರ್ಚಾಸ್ಪರ್ಧೆ, ಗಾಯನ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುತ್ತಿದ್ದರು. ಬಾಲ್ಯದ ಇವರ ಮತ್ತೊಂದು ಮುಖ್ಯ ಸಾಂಸ್ಕೃತಿಕ ಭಾಗವೆಂದರೆ ಸಿನಿಮಾಗಳು. ಅದರಲ್ಲೂ ವಿಶೇಷವಾಗಿ ಡಾ.ರಾಜ್ಕುಮಾರ್ ಅವರ ಸಿನಿಮಾಗಳು.
ಇವರು ಮಂಗಳೂರು ಆಕಾಶವಾಣಿಯಲ್ಲಿ 'ಎ' ಶ್ರೇಣಿಯ ಧ್ವನಿದಾನ ಕಲಾವಿದೆ. ಆಕಾಶವಾಣಿಯಲ್ಲಿ ಇವರ ಕವಿತೆಗಳು ಕಾವ್ಯಧಾರೆ ವಿಭಾಗದಲ್ಲಿ ಮತ್ತು ಭಾವಗಾನ ವಿಭಾಗದಲ್ಲಿ ನಿರಂತರ ಪ್ರಸಾರವಾಗುತ್ತಿವೆ. ಭಾಷಣ ಮತ್ತು ಕಥೆಗಳೂ ಪ್ರಸಾರವಾಗಿವೆ.
ಜ್ಯೋತಿ ಅವರಿಗೆ ಮೊದಲಿನಿಂದಲೂ ಅನಿಸಿದ್ದನ್ನು ಬರೆದಿಡುವ ಹವ್ಯಾಸವಿತ್ತು. ತಾಯಿ ತಂದೆ ದೂರವಿದ್ದಿದ್ದರಿಂದ ಟಿ.ನರಸೀಪುರದ ಅಜ್ಜಿಮನೆಯಲ್ಲಿದ್ದ ಇವರಿಗೆ ಅಪ್ಪ ಅಮ್ಮನಿಗೆ ಆತ್ಮೀಯವಾಗಿ ಉತ್ಕಟವಾಗಿ ಪತ್ರ ಬರೆಯುವ ಮೂಲಕ ಕನ್ನಡ ಬರವಣಿಗೆ ಆರಂಭವಾಯಿತು. ಈಗಲೂ ಇವರಿಗೆ ಪತ್ರ ಬರೆಯುವುದೆಂದರೆ ಬಹಳ ಇಷ್ಟದ ಕೆಲಸ. ಜ್ಯೋತಿ ಅವರು ಶಾಲೆಯಲ್ಲಿದ್ದ ದಿನಗಳಲ್ಲಿ ಬಿ ಕಾಂ ತರಗತಿಯಲ್ಲಿದ್ದಾಗ ಕನ್ನಡ ಮೇಡಂ ಸಿ.ಜಿ.ಉಷಾದೇವಿಯವರು ಪಾಠದ ಮಧ್ಯೆ ಅಮೃತಾ ಪ್ರೀತಂ 'ಸುನೇರಿ' ಕವನಸಂಕಲನವನ್ನು ಉದಾಹರಿಸುವಾಗ ಆಕೆಯ ವ್ಯಕ್ತಿತ್ವ - ಅಗಾಧ ಪ್ರೇಮ ಇವರ ಮನಸ್ಸನ್ನು ಹೊಕ್ಕಿತು. ಆದರೆ ಇವರು 'ಕವಿತೆ' ಬರೆದಿದ್ದು ತಡವಾಗಿ. ಪುಟ್ಟ ಪುಟ್ಟ ಹನಿಗವನಗಳು 'ಸುದ್ದಿ ಸಂಗಾತಿ' ಪತ್ರಿಕೆ, ವಾರ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಇವರು ಕವಿತೆ ಬರೆದಿದ್ದು ಇಬ್ಬರು ಮಕ್ಕಳು ಹುಟ್ಟಿದ ನಂತರ. ಆಗ ಇವರ ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ ಆತ್ಮವಿಶ್ವಾಸ ಬೆಳೆಯಿತು.
ಇದುವರೆಗೆ ಜ್ಯೋತಿ ಅವರ ಹನ್ನೆರಡು ಕೃತಿಗಳು ಪ್ರಕಟವಾಗಿವೆ. ಇವರ 'ಚುಕ್ಕಿ' ಕವನ ಸಂಕಲನ ಯು.ಆರ್. ಅನಂತಮೂರ್ತಿಯವರ ಋಜುವಾತು ಪ್ರಕಾಶನದಿಂದ ಪ್ರಕಟವಾಗಿದೆ. ಇದಕ್ಕೆ ಕಡೆಂಗೋಡ್ಲು ಪ್ರಶಸ್ತಿ, ಅಮ್ಮ ಪ್ರಶಸ್ತಿಗಳಂಥ ಹಲವು ಮುಖ್ಯ ಪ್ರಶಸ್ತಿಗಳು ಸಂದಿವೆ. 'ಮಾಯಾಪೆಟ್ಟಿಗೆ' ಕವನಸಂಕಲನ ಕಿ ರಂ ನಾಗರಾಜ್ ಅವರ 'ಅಧ್ಯಯನ ಮಂಡಲ' ದಿಂದ ಪ್ರಕಟವಾಗಿದೆ. ಇದಕ್ಕೆ 'ಗೀತಾ ದೇಸಾಯಿ', 'ನೀಲಗಂಗಾ', 'ನಿರತ' ಮುಂತಾದ ಪ್ರಶಸ್ತಿಗಳು ಸಂದಿವೆ. 'ವರನಂದಿ ಪ್ರತಿಮೆ' ಕವನ ಸಂಕಲನ ಲೋಹಿಯಾ ಪ್ರಕಾಶನದಿಂದ ಪ್ರಕಟವಾಗಿದ್ದು ಮುಂಬೈ ಸುಶೀಲಾ ಶೆಟ್ಟಿ ಪ್ರಶಸ್ತಿ, ಸಂಸ್ಕೃತಿ ಪ್ರತಿಷ್ಠಾನದ ಹಂಸಕಾವ್ಯ ರಾಷ್ಟ್ರೀಯ ಪುರಸ್ಕಾರಗಳನ್ನು ಗಳಿಸಿದೆ. ಇವರ 'ಜಟಾಯು ಪಕ್ಷಿಗೆ ಶ್ರದ್ಧಾಂಜಲಿ' ಕವನ ಸಂಕಲನ ಮುದ್ದಣ ಕಾವ್ಯ ಪ್ರಶಸ್ತಿಗೆ ಪಾತ್ರವಾಗಿವೆ. 'ಪ್ರೀತಿ ಮತ್ತು ಪ್ರೀತಿ ಮಾತ್ರ' ಲೇಖನ ಕೃತಿಗೆ ಪುತ್ತೂರು ಕರ್ನಾಟಕ ಸಂಘದ ಉಗ್ರಾಣ ಪ್ರಶಸ್ತಿ ದೊರೆತಿದೆ. 'ತಂತಿಪಕ್ಷಿ' ಎಂಬ ಕಥಾಸಂಕಲನವೂ ಪ್ರಕಟವಾಗಿದೆ.
ಜ್ಯೋತಿ ಅವರು ಅಂಕಣಗಾರ್ತಿಯಾಗಿಯೂ ಹೆಸರಾಗಿದ್ದಾರೆ. 'ಈ ಕ್ಷಣ' ಅಗ್ನಿ ವಾರಪತ್ರಿಕೆಗೆ ಬರೆದ ಅಂಕಣ. 'ಜೋಲಿ ಲಾಲಿ' ನಾಲ್ಕು ವರ್ಷಗಳ ಕಾಲ 'ವಾರ್ತಾಭಾರತಿ' ಗಾಗಿ ಎರಡು ಭಾಗಗಗಳಲ್ಲಿ ಪ್ರಕಟವಾಗಿರುವ ಅಂಕಣ. 'ಹೊಸಪಕ್ಷಿರಾಗ' ಸಂವಾದ ಪತ್ರಿಕೆಗಾಗಿ ಬರೆದ ಅಂಕಣ. 'ಕಣ್ಣಭಾಷೆ' ಶೈನಾ ಪತ್ರಿಕೆಗಾಗಿ ಬರೆದ ಕನ್ನಡ ಪ್ರೀತಿಯ ಅಂಕಣ. 'ಮನಸು ಮಾಗಿದ ಸುಸ್ವರ' ಜನಬಿಂಬ ಪತ್ರಿಕೆಗೆ ಬರೆದ ಮೌಲಿಕ ಕನ್ನಡ ಚಿತ್ರಗೀತೆಗಳ ಅಂಕಣ. ಈ ಕೃತಿಗಳಿಗೆ ಹಾ ಮಾ ನಾಯಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೇಷ್ಠ ಪುಸ್ತಕ ಬಹುಮಾನ, ಅಂತರ್ರಾಷ್ಟ್ರೀಯ ಮಹಿಳಾ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ. ಕೇಂದ್ರಸಾಹಿತ್ಯ ಅಕಾಡೆಮಿ ಕವಿಗೋಷ್ಠಿಯಿಂದ ಹಿಡಿದು ಮೈಸೂರು ದಸರಾ ಕವಿಗೋಷ್ಠಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಹಂಪಿ ಉತ್ಸವ ಮುಂತಾದ ಅನೇಕ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರು ದಸರಾ ಕವಿಗೋಷ್ಠಿಯ 'ಚಿಗುರು' ಕವಿಗೋಷ್ಠಿಯ ಅಧ್ಯಕ್ಷತೆಯೂ ಇವರಿಗೆ ಬಂದಿತ್ತು.
ಸಾಹಿತ್ಯ ಅಕಾಡೆಮಿ ವಾರ್ಷಿಕ ಸಂಚಿಕೆಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿದೆ. ಇವರ 'ದೀಪ ಬೆಳಗುವ ಹೊತ್ತು' ಕವಿತೆ ಮಂಗಳೂರು ವಿ ವಿ ಕನ್ನಡ ಪಠ್ಯಪುಸ್ತಕ್ಕೆ 2019ರಲ್ಲಿ ಪಠ್ಯವಾಗಿತ್ತು. ಇವರ ಹಲವು ಕವಿತೆಗಳು ಹಿಂದಿ, ಇಂಗ್ಲಿಷ್, ಬಂಗಾಳಿ, ಮಲೆಯಾಳಂ ಭಾಷೆಗಳಿಗೆ ಅನುವಾದಗೊಂಡಿವೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಧುನಿಕ ಕಾವ್ಯ ಸಂಪುಟದಲ್ಲಿ ಇವರ ಕಾವ್ಯದ ಬಗೆಗಿನ ವಿಮರ್ಶೆ ಸೇರಿದೆ. ಬೆಂಗಳೂರು ವಿ ವಿ ಪ್ರಕಟಿಸಿರುವ ಕವನ ಸಂಕಲನವೊಂದರಲ್ಲಿ ಇವರ ಕವಿತೆಗಳು ಸೇರಿವೆ. ರಾಜ್ಯದ ಹಲವು ಮುಖ್ಯ ಪತ್ರಿಕಾ ವಿಶೇಷಾಂಕಗಳಲ್ಲಿ, 'ಕಾಲ ನಿರ್ಣಯ' ಕ್ಯಾಲೆಂಡರಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ.
ಜ್ಯೋತಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎನ್ ಇ ಪಿ ಮೂರು ಸೆಮಿಸ್ಟರ್ ಬಿ ಎಸ್ಸಿ ಕನ್ನಡ ಪಠ್ಯಪುಸ್ತಕಗಳನ್ನು ಸಂಪಾದಕರಾಗಿ ರೂಪಿಸಿದ್ದಾರೆ.
ಜ್ಯೋತಿ ಅವರು ಕಾರ್ಕಳ ತಾಲ್ಲೂಕು ಹದಿನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 2017 ರಲ್ಲಿ ಪ್ರಥಮ ಮಹಿಳಾ ಅಧ್ಯಕ್ಷೆಯಾದ ಗೌರವ ಗಳಿಸಿದರು. ಇವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ. ಇವರ ಮಕ್ಕಳಿಬ್ಬರೂ ಕನ್ನಡದ ಲೇಖಕರು. ಕಿರಿಯಮಗ ಪೂರ್ಣಪ್ರಜ್ಞ ಅವರ ' ಪೂರ್ಣನ ಗರಿಗಳು' ಛಂದ ಪುಸ್ತಕದಿಂದ ಪ್ರಕಟವಾಗಿದೆ. ಹಿರಿಯ ಮಗ ಗೌತಮ ಕೂಡ ಸೃಜನಶೀಲ ಕಥೆಗಾರರು ಮತ್ತು ಅನುವಾದಕರು.
ತಮ್ಮ ಬದುಕಿನ ಚಿಂತನೆಗಳ ಕುರಿತು ಹೇಳುವ ಜ್ಯೋತಿ ಅವರು "ಪ್ರೇಮ, ಜೀವನ ಪ್ರೀತಿ, ಸುತ್ತಲಿನ ಜಗತ್ತಿಗೆ ಮಾನವೀಯವಾಗಿ ಮಿಡಿಯುವುದು, ಶೋಷಣೆಯ ವಿರುದ್ಧ ದನಿಯೆತ್ತುವುದು ನನ್ನ ಧ್ಯಾನವಾಗಿದೆ. ಸತ್ಯಪರಹಾದಿ, ಪ್ರಜಾಪ್ರಭುತ್ವದ ಬೆಳಕು ನಾನು ಇಷ್ಟಪಡುವ ಸಂಗತಿಗಳು. ಬುದ್ಧನ ವಿಪಶ್ಯನ ಧ್ಯಾನದ ಸಾಧಕಿಯಾಗಿ ದುಃಖಗಳನ್ನು ಮೀರುವುದನ್ನು ಕಲಿತಿದ್ದೇನೆ" ಎನ್ನುತ್ತಾರೆ.
ಜ್ಯೋತಿ ಗುರುಪ್ರಸಾದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Jyothi R 🌷🌷🌷
ಕಾಮೆಂಟ್ಗಳು