ಮನೋರಮಾ ಎಂ. ಭಟ್
ಮನೋರಮಾ ಎಂ. ಭಟ್ ನಮನ
ನಾಡಿನ ಹಿರಿಯ ಬರಹಗಾರ್ತಿ, ಸಮಾಜ ಸುಧಾರಕಿ, ಹೋರಾಟಗಾರ್ತಿ, ಕಲಾವಿದೆ, ಸಂಘಟನಾ ಚತುರೆ ಮನೋರಮಾ ಎಂ. ಭಟ್ ಅವರು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಮನೋರಮಾ ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ 1932ರ ಜುಲೈ 15 ರಂದು ಜನಿಸಿದರು. ತಂದೆ ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿಗಳು ಘನ ವಿದ್ವಾಂಸರಾಗಿದ್ದರು. ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಸಂಸ್ಕೃತ ಪಂಡಿತರಾಗಿದ್ದರು. ತಾಯಿ ಸತ್ಯಭಾಮಾ. ಇವರಿಗೆ ಕನ್ನಡ, ಹಿಂದಿ, ಆಂಗ್ಲಭಾಷಾ ಜ್ಞಾನವಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತದ ಜ್ಞಾನವೂ ಇತ್ತು.
ಮನೋರಮಾ ಅವರ ತಂದೆ ಪರಮೇಶ್ವರ ಶಾಸ್ತ್ರಿಗಳು ತೀವ್ರ ಬಡತನದ ಮಧ್ಯೆಯೂ ಅಗಾಧ ಓದುವ ತುಡಿತವಿದ್ದ ಕಾರಣ, ತಮ್ಮ 16 ನೆಯ ವಯಸ್ಸಿನಲ್ಲಿ ತಿರುವಾಂಕೂರಿನ ಅನಂತಪದ್ಮನಾಭ ದೇವಸ್ಥಾನದಲ್ಲಿದ್ದುಕೊಂಡು ಮಹಾರಾಜಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತಾಭ್ಯಾಸವನ್ನು ಮಾಡಿದರು. 10 ವರ್ಷಗಳ ಕಾಲ ಅಲ್ಲಿದ್ದು ’ಮಹೋಪಾಧ್ಯಾಯ’ ಪದವಿ ಗಳಿಸಿಕೊಂಡು ಊರಿಗೆ ಹಿಂತಿರುಗಿ ಪೆರಡಾಲ ಉದನೇಶ್ವರ ದೇವಸ್ಥಾನದಲ್ಲಿ ಖಂಡಿಗೆ ಮನತನದವರ ನೇತೃತ್ವದ ಸಂಸ್ಕೃತ ಪಾಠಶಾಲೆಯಲ್ಲಿ ಸ್ಥಾಪಕ ಮುಖ್ಯೋಪಾದ್ಯಾಯರಾಗಿ ನೇಮಕಗೊಂಡರು. ವಿದ್ಯೆಯ ಕುರಿತಾಗಿ ಅಗಾಧವಾದ ಪ್ರೀತಿ ಗೌರವಗಳಿದ್ದ ಶಾಸ್ತ್ರಿಗಳು ತಮ್ಮ ಪತ್ನಿಯನ್ನೂ, ಮುಂದೆ ಮನೋರಮಾ ಅವರೂ ಸೇರಿದಂತೆ ತಮ್ಮ ಎಲ್ಲಾ ಆರು ಮಕ್ಕಳನ್ನೂ ಅದೇ ಸಂಸ್ಕೃತ ಶಾಲೆಗೆ ಸೇರಿಸಿದರು. ಮಕ್ಕಳೆಲ್ಲರನ್ನೂ ವಿದ್ಯಾವಂತರನ್ನಾಗಿ ರೂಪಿಸಿದರು. ಮನೋರಮಾರಿಗೆ ಮೂವರು ಅಣ್ಣಂದಿರು, ಒಬ್ಬಳು ಅಕ್ಕ ಮತ್ತು ಒಬ್ಬಾಕೆ ತಂಗಿ. ಇವರ ಒಬ್ಬ ಅಣ್ಣ ಕೆ. ರಾಮಕೃಷ್ಣ ವೃತ್ತಿಯಲ್ಲಿ ನ್ಯಾಯವಾದಿಗಳು. ರಘು, ನಿರ್ಮಲಾ, ಶಾಸ್ತ್ರಿ ಎನ್ನುವ ಹೆಸರಲ್ಲಿ ವ್ಯಂಗ್ಯ ಚಿತ್ರಗಳನ್ನು ರಚಿಸುತ್ತಿದ್ದರು. ಶಿಂಗಣ್ಣಾ ವ್ಯಂಗ್ಯಚಿತ್ರ ಇವರದ್ದೇ. ಮತ್ತೋರ್ವ ಸಹೋದರ ಕೆ. ಶ್ರೀಕಂಠ ಪ್ರಸಿದ್ಧ ಕತೆಗಾರರು.
ಮನೋರಮಾ ಅವರು ಪಠ್ಯೇತರ ವಿಷಯಗಳಲ್ಲಿ ಅಂದರೆ ಆಟ, ಪದ ಹೇಳುವಿಕೆ, ಕತೆ ಹೇಳುವಿಕೆ, ನೃತ್ಯ, ಅಭಿನಯ ಇತ್ಯಾದಿಗಳಲ್ಲಿ ಮುಂದಿದ್ದರೂ ಓದಿನಲ್ಲಿ ತುಸು ಹಿಂದಿದ್ದರು. ಏಳನೇ ತರಗತಿಯಿಂದ ಕನ್ನಡ ಮಾಧ್ಯಮದಿಂದ ಆಂಗ್ಲ ಮಾಧ್ಯಮಕ್ಕೆ ಪುತ್ತೂರಿನ ಸಂತ ವಿಕ್ಟರ್ ಶಾಲೆಯನ್ನು ಸೇರಿದರು. ಅಲ್ಲಿ ಫಾದರ್ ಪತ್ರಾವೋ ಅವರ ನಿರಂತರ ಪ್ರೋತ್ಸಾಹ, ಆಸಕ್ತಿ, ಕಾಳಜಿಯ ಕಾರಣ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದರು. ಅಲ್ಲಿಂದ ಮುಂದೆ ಓದಿನಲ್ಲಿ ಎಲ್ಲಿಯೂ ಹಿಂದೆ ಬೀಳದೆ ಉತ್ತಮ ಅಂಕಗಳನ್ನು ಗಳಿಸುತ್ತ ಸಾಗಿದರು. ತಾಯಿಯಿಂದ ಬಂದ ಪ್ರೇರಣೆಯಿಂದ ಶಾಸ್ತ್ರೀಯ ಸಂಗೀತದ ತರಗತಿಯನ್ನೂ ಸೇರಿದ್ದರು. ಸಂಗೀತ ಇವರಿಗೆ ಒಲಿಯಲಿಲ್ಲ. ಆದರೂ ಸಂಗೀತದ ಆಸಕ್ತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದರು. ನೃತ್ಯದಲ್ಲಿ ಆಸಕ್ತಿ ಇದ್ದ ಮನೋರಮಾ ಅವರು ಡಾ. ಸತ್ಯಸುಂದರ ರಾಯರ ಬಳಿ ಕೆಲಕಾಲ ನೃತ್ಯಾಭ್ಯಾಸ ಮಾಡಿದ್ದರು.
ಮನೋರಮಾ ಅವರು ಮುಳಿಯ ತಿಮ್ಮಪ್ಪಯ್ಯನವರ ಸುಪುತ್ರರಾದ ಮುಳಿಯ ಮಹಾಬಲ ಭಟ್ಟರನ್ನು ವಿವಾಹವಾದ ಬಳಿಕ ನಾಟಕ, ಕತೆ, ಕವಿತೆ, ಲೇಖನಗಳನ್ನು ಬರೆಯಲು ಆರಂಭಿಸಿದರು. ಜಾತಿ ಮತಗಳನ್ನು ಮೀರಿ ಸಮಾಜಮುಖಿಯಾದರು. ಮುಳಿಯ ಮಹಾಬಲ ಭಟ್ಟರು ಮಹಾನ್ ಯಕ್ಷಗಾನ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದವರು. 1999ರಲ್ಲಿ ಮುಳಿಯ ಮಹಾಬಲ ಭಟ್ಟರು ನಿಧನರಾದರು. ಪತಿಯವರ ನಿಧನದ ಬಳಿಕವೂ ಇವರ ಸಮಾಜಪರ ಕೈಂಕರ್ಯಗಳು ಮುಂದುವರೆಯುತ್ತ ಬಂದವು. ಅಮೇರಿಕದಲ್ಲಿ ನೆಲೆಗೊಂಡ ಪ್ರಸಿದ್ಧ ಉದ್ಯಮಿ ಜಯರಾಮ್ ಭಟ್ ಹಾಗೂ ಬೆಂಗಳೂರಿನಲ್ಲಿರುವ ಖ್ಯಾತ ಛಾಯಾಚಿತ್ರ ತಂತ್ರಜ್ಞ ಮಹೇಶ್ ಎಂ. ಭಟ್ ಇವರ ಸುಪುತ್ರರು.
ಮನೋರಮಾ ಎಂ. ಭಟ್ಟರು ವಿಧವೆಯರ ವಿಚಾರದಲ್ಲಿ ನಮ್ಮ ಸಮಾಜದ ದೃಷ್ಟಿ ಬದಲಾಗಬೇಕೆಂದು ಮೊದಲಿನಿಂದಲೂ ಪ್ರತಿಪಾದಿಸುತ್ತ ಬಂದವರು. ಈ ಬಗ್ಗೆ ತಮ್ಮ ಬರಹಗಳ ಮೂಲಕ ಜಾಗೃತಿಯನ್ನು ಮೂಡಿಸುವ ಪ್ರಯತ್ನವನ್ನು ಮಾಡಿದರು.
ಮನೋರಮಾ ಎಂ ಭಟ್ ಅವರು ನೋಬೆಲ್ ಪ್ರಶಸ್ತಿ ವಿಜೇತ ಅರ್ನೆಸ್ ಹೇಮಿಂಗ್ವೇಯ ಕಾದಂಬರಿ 'ಓಲ್ದ್ ಮ್ಯಾನ್ ಆಂಡ್ ದ ಸಿ' ರೇಡಿಯೋ ನಾಟಕವನ್ನು ಕೇಳಿ ಪ್ರಭಾವಿರಾದರು. ಅದು ಬಾನುಲಿ ಮಾಧ್ಯಮಕ್ಕೆ ಪ್ರವೇಶಿಸಲು ಇವರಿಗೆ ಪ್ರೇರಣೆಯನ್ನೊದಗಿಸಿತು. ಮುಂದಕ್ಕೆ ಸ್ವಯಂ ಒಬ್ಬ ಕಲಾವಿದೆಯಾಗಿ, ನಿರ್ದೇಶಕಿಯಾಗಿ, ರಂಗಕಲಾವಿದೆಯಾಗಿ, ಕತೆಗಾರ್ತಿಯಾಗಿ ತಮ್ಮನ್ನು ಗುರುತಿಸಿಕೊಂಡರು.
’ಸ್ವಯಂವರ', 'ಶಬ್ದಗಳಾಗದ ಧ್ವನಿಗಳು’, 'ಮೋತಿ ಪಾಠ ಕಲಿಸಿತ್ತು' ಮುಂತಾದವು ಮನೋರಮಾ ಅವರ ಕಥಾಸಂಕಲನಗಳು. ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಲೇಖಕಿಯರು, ವ್ಯಂಗ್ಯ ಬದುಕು (ಶಿಂಗಣ್ಣ ಖ್ಯಾತಿಯ ಕೆ. ರಾಮಕೃಷ್ಣ ಅವರ ಜೀವನ ಮತ್ತು ಸಾಧನೆ), ಮುಳಿಯರ ನೆನಪು (ಮುಳಿಯ ತಿಮ್ಮಪ್ಪಯ್ಯನವರ ಜೀವನ ಸಾಧನೆ ಕುರಿತ ಲೇಖನ ಸಂಗ್ರಹ) ಇವರ ಸಂಪಾದಿತ ಕೃತಿಗಳು. ’ಹೆಣ್ಣಿಗೇಕೆ ಈ ಶಿಕ್ಷೆ?’ ಎಂಬ ವೈಚಾರಿಕ ಬರಹವನ್ನು ಬರೆದಿದ್ದರು. ಸುಮಾರು ನಲವತ್ತು ನಾಟಕಗಳನ್ನು ರಚಿಸಿದ್ದರು. ಇವು ಹೊಸಹಾದಿ, ಬಲಿ, ನಿರ್ಧಾರ, ಆಯ್ಕೆ ಮುಂತಾದ ನಾಟಕ ಸಂಕಲನಗಳಲ್ಲಿವೆ.
ಮನೋರಮಾ ಅವರು ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ "ಗುಲಾಬಿ ಟಾಕೀಸ್" ಚಲನಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದರು. 'ಸಾಧನಾ' ಸಾಹಿತ್ಯಿಕ-ಸಾಂಸ್ಕೃತಿಕ ಬಳಗದ ಸದಸ್ಯೆಯಾಗಿದ್ದ ಇವರು, ಕೆ.ಶಿವರಾಮ ಕಾರಂತರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಸಾಧನಾ ವತಿಯಿಂದ ಮಂಗಳೂರು, ಪುತ್ತೂರು ಮತ್ತು ಕೋಟದಲ್ಲಿ, ಕಾರಂತರ ಗೀತನಾಟಕವಾದ ಕಿಸಾ ಗೋತಮಿಯಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದರು.
ಮನೋರಮಾ ಎಂ. ಭಟ್ಟರಿಗೆ ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ಸಾಗರದ ಹೊಸಬಾಳೆ ಅನಂತಪ್ಪ ಸೇವಾ ಪುರಸ್ಕಾರ, ಮಂಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಂಸ್ಕಾರ ಭಾರತಿ ಪ್ರಶಸ್ತಿ ಮತ್ತು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದ್ದವು. ಇವರು ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಮನೋರಮಾ ಎಂ. ಭಟ್ ಅವರು 1987ರಲ್ಲಿ ಆರಂಭವಾದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಪದಾಧಿಕಾರಿಯಾಗಿ ಹೆಣ್ಣುಮಕ್ಕಳ ಬದುಕಿನ ಪುರೋಗತಿಯ ಬಗ್ಗೆ ಸದಾ ಹೋರಾಟನಿರತರಾಗಿದ್ದವರು. ಇನ್ನೂ ಬರೆಯಬೇಕೆಂಬ ಹಂಬಲ, ಇನ್ನೂ ಕಸೂತಿ ಕೆಲಸ ಮಾಡಬೇಕೆಂಬ ತುಡಿತ ಅವರಲ್ಲಿ ಕೊನೆಯವರೆಗೂ ಜೀವಂತವಿತ್ತು. ಅವರು ತಾವು ಹಿರಿಯವಯಸ್ಸಿನಲ್ಲಿ ನೆಲೆಗೊಂಡಿದ್ದ 'ಅವ್ತಾರ್'(Avtar Assisted Living) ನೆಲೆಗೆ ತಮ್ಮನ್ನು ನೋಡಬಂದವರಿಗೆಲ್ಲ ತಾವೇ ನೇಯ್ದ ಶಾಲು ಹೊದಿಸಿ ಸನ್ಮಾನಿಸಿ ಕಳುಹಿಸುವುದು ಅವರ ಪರಿಪಾಠವಾಗಿತ್ತು. ತಮ್ಮ ಮಾವನವರಾದ ಮುಳಿಯ ತಿಮ್ಮಪ್ಪಯ್ಯನವರ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಎರಡು ದಶಕಗಳಗಿಂತಲೂ ಹೆಚ್ಚುಕಾಲ ಮುಳಿಯ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದರು. 2024ರ ಸೆಪ್ಟೆಂಬರ್ 1ರಂದು ಕೂಡಾ ಕಾರ್ಯಕ್ರಮದಲ್ಲಿ ನಸುನಗುತ್ತ ಭಾಗವಹಿಸಿ ಭಾಷಣ ಮಾಡಿದ್ದರು.
ಮನೋರಮಾ ಎಂ ಭಟ್ ಅವರು 2024ರ ಸೆಪ್ಟೆಂಬರ್ 15ರಂದು ನಿಧನರಾದರು. ಈ ಮಹಾನ್ ಚೇತನಕ್ಕೆ ನಮನ.
Respects to departed soul Manorama M. Bhat 🌷🙏🌷
ಕಾಮೆಂಟ್ಗಳು