ರಾಧಾ ಶ್ರೀಧರ್
ರಾಧಾ ಶ್ರೀಧರ್
ನಾಟ್ಯಗುರು ಶ್ರೀಮತಿ ರಾಧಾ ಶ್ರೀಧರ್ ನೃತ್ಯಕ್ಷೇತ್ರದ ಹಿರಿಯ ಹೆಸರು. ಮಹಾನ್ ಕಲಾತಪಸ್ವಿಗಳಿಂದ ಕಲಿತು - ಬೆಳೆದು - ತಾವೂ ಅನೇಕ ಕಲಾವಿದರನ್ನು ಪೋಷಿಸಿ ಬೆಳೆಸುತ್ತಾ ಬಂದಿರುವ ಮಹತ್ವದ ಸಾಧಕರು ರಾಧಾ ಶ್ರೀಧರ್. ಅವರು ನೃತ್ಯ, ಹಾಡುಗಾರಿಕೆ, ವಾದ್ಯವಾದನ ಹೀಗೆ ಎಲ್ಲ ಕಲೆಗಳಲ್ಲೂ ಪರಿಣತರು.
ರಾಧಾ 1938ರ ಸೆಪ್ಟೆಂಬರ್ 9ರಂದು ತುಮಕೂರಿನಲ್ಲಿ ಜನಿಸಿದರು. ತಂದೆ ಅಪ್ಪಣ್ಣಯ್ಯ ಸೆಟ್ಲೂರ್ ತಾಯಿ ಗೋದಾಬಾಯಿ. ಸುಮಾರು ಏಳೆಂಟು ವಯಸ್ಸಿನಲ್ಲೇ ರಾಧಾ ಅವರ ನೃತ್ಯಾಸಕ್ತಿ ಮತ್ತು ಅಭಿನಯ ಪ್ರತಿಭೆ ಮನೆಯವರ ಗಮನಕ್ಕೆ ಬಂತು. ಹೀಗಾಗಿ ಮೊದಲಿಗೆ ನಾಟ್ಯಾಚಾರ್ಯ ಎಚ್.ಆರ್. ಕೇಶವಮೂರ್ತಿ ಅವರಲ್ಲಿ ಭರತನಾಟ್ಯ ಮತ್ತು ಕಥಕ್ ನೃತ್ಯವನ್ನು ಹಲವಾರು ವರ್ಷ ಕಲಿತರು. ಅನಂತರ ಯು. ಎಸ್.ಕೃಷ್ಣರಾವ್- ಚಂದ್ರಭಾಗಾದೇವಿ ದಂಪತಿಗಳ ಬಳಿ ಭರತನಾಟ್ಯಾಭ್ಯಾಸ ಮುಂದುವರಿಸಿದರು. ಮುತ್ತಯ್ಯ ಪಿಳ್ಳೈ ಮತ್ತು ವೆಂಕಟಲಕ್ಷಮ್ಮ ಅವರಲ್ಲಿ ಹೆಚ್ಚಿನ ನೃತ್ಯ ಶಿಕ್ಷಣ ಪಡೆದರು. ಕೆಲವು ಕಾಲ ಆಚಾರ್ಯುಲು ಅವರಿಂದ ಕುಚುಪುಡಿ ನೃತ್ಯಶೈಲಿಯನ್ನೂ ಅಭ್ಯಾಸ ಮಾಡಿದರು. ಜೊತೆಜೊತೆಗೆ ಕರ್ನಾಟಕ ಸಂಗೀತವನ್ನು ಪಲ್ಲವಿ ಚಂದ್ರಸಿಂಗ್ ಅವರ ಬಳಿ ಹತ್ತಾರುವರ್ಷ ಕಲಿತು ಸೊಗಸಾಗಿ ಹಾಡಲು ಶಕ್ತರಾದರು.
ರಾಧಾ ಅವರು ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ನಂತರ ಬಿ.ಎಡ್ ಪದವಿಯನ್ನೂ ಪಡೆದರು. ಮದುವೆ ಆಗಿ, ಮಕ್ಕಳಾದ ಮೇಲೂ ಪತಿಯವರ ಪ್ರೋತ್ಸಾಹದಿಂದ ನೃತ್ಯ ಕಲಿಕೆಯನ್ನು ಮುಂದುವರಿಸಿದರು. ಪರಿಪೂರ್ಣ ಕಲಾವಿದರಾದವರಿಗೆ ಎಲ್ಲ ಕಲೆಗಳ ಪರಿಚಯವೂ ಅತ್ಯಗತ್ಯ ಎಂಬ ಅಭಿಪ್ರಾಯವುಳ್ಳ ರಾಧಾ ಅವರು, ಪ್ರಸಿದ್ಧ ಮೃದಂಗ ವಿದ್ವಾನ್ ಟಿ.ಎ.ಎಸ್. ಮಣಿ ಅವರಿಂದ ಮೃದಂಗ ವಾದನವನ್ನೂ ಕಲಿತು ಸಂಪೂರ್ಣ ಲಯಜ್ಞಾನ-ತಾಳಜ್ಞಾನಗಳ ಮೇಲೆ ಹತೋಟಿ ಸಾಧಿಸಿದರು.
ರಾಧಾ ಶ್ರೀಧರ್ ವಿದ್ಯಾರ್ಥಿ ದೆಸೆಯಲ್ಲಿಯೇ ನಾಡಿನ ಹಲವಾರು ಕಡೆ ಪ್ರತಿಷ್ಟಿತ ನೃತ್ಯೋತ್ಸವಗಳಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಹಲವು ನೃತ್ಯಶೈಲಿಗಳ ಪ್ರತಿಭಾನ್ವಿತರಾದ ಇವರು, 1969 ರಲ್ಲಿ ತಮ್ಮದೇ ಆದ 'ವೆಂಕಟೇಶ ನಾಟ್ಯ ಮಂದಿರ’ ಎಂಬ ನೃತ್ಯಶಾಲೆಯನ್ನು ತೆರೆದು, ಶುದ್ಧ ಶಾಸ್ತ್ರೀಯ ಭರತನಾಟ್ಯವನ್ನು ಕಲಿಸತೊಡಗಿದರು. ಸುವರ್ಣ ಮಹೋತ್ಸವ ಆಚರಿಸಿರುವ ಇವರ ನಾಟ್ಯ ಶಾಲೆ, ಗುಣಮಟ್ಟದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು, ಇದುವರೆಗೂ ಹಲವುನೂರು ನೃತ್ಯಪಟುಗಳನ್ನು ತಯಾರು ಮಾಡಿದೆ.
ವಿಶ್ವದಾದ್ಯಂತ ತಮ್ಮ ತಂಡದೊಡನೆ ನೃತ್ಯ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ರಾಧಾ ಶ್ರೀಧರ್ ಅವರದು. ಇದಲ್ಲದೆ ಹಂಪಿ, ಕದಂಬ, ಪಟ್ಟದಕಲ್ಲು, ಮೇಲುಕೋಟೆ, ಸರ್ವಧರ್ಮ ಸಮ್ಮೇಳನ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ಸ್ವಾತಂತ್ರ್ಯೋತ್ಸವ ಮುಂತಾಗಿ ಸರ್ಕಾರ ನಡೆಸುವ ಎಲ್ಲ ಉತ್ಸವಗಳಲ್ಲಿ, ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಅಸಂಖ್ಯಾತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ದೂರದರ್ಶನದಲ್ಲಿ ಐತಿಹಾಸಿಕ ಖ್ಯಾತಿ ಪಡೆದ `ನೆಕ್ಟರ್ ಇನ್ ಸ್ಟೋನ್ ‘ ಮತ್ತು `ಸಾಂಗ್ಸ್ ಆಫ್ ಸೋಮನಾಥ್ ಪುರ್‘ ನೃತ್ಯ ಸಂಯೋಜನೆಯ ಹಿರಿಮೆ ರಾಧಾ ಶ್ರೀಧರ್ ಅವರದು. ದೂರದರ್ಶನದ ಇಪ್ಪತ್ತು ಕಂತುಗಳ ಜನಪ್ರಿಯ ಧಾರಾವಾಹಿ ‘ಕೃಷ್ಣ ನೀ ಬೇಗನೆ ಬಾರೋ’ಗೆ ನೃತ್ಯ ನಿರ್ದೇಶನ ಮಾಡಿದರು. ಚಂದನ ವಾಹಿನಿಗೆ ಪ್ರಸಿದ್ಧ 'ಚಾಮುಂಡೆಶ್ವರಿ ಪಾಲಯಮಾಂ’ ಮುಂತಾದ ಅನೇಕ ನೃತ್ಯರೂಪಕಗಳನ್ನು ಪ್ರದರ್ಶಿಸಿದರು.
ರಾಧಾ ಶ್ರೀಧರ್ ನೃತ್ಯ ಸಂಯೋಜಿಸಿದ ಖ್ಯಾತ ನೃತ್ಯ ರೂಪಕಗಳು ಅನೇಕ. ಅವುಗಳಲ್ಲಿ ಗೀತಗೋವಿಂದ, ಹನುಮದ್ವಿಲಾಸ, ರಾಮಾಯಣ, ನೀಲಾಂಜನೆ, ಶ್ರೀನಿವಾಸ ಕಲ್ಯಾಣ, ನವವಿಧ ಭಕ್ತಿ, ಬುದ್ಧ ಮತ್ತು ಆಮ್ರಪಾಲಿ, ವಿಕ್ರಮೋರ್ವಶೀಯ, ಛತ್ರಪತಿ ಶಿವಾಜಿ, ಅತ್ತಿಮಬ್ಬೆ, ಶಾಂತಲಾ, ಮೋಹಿನಿ ಭಸ್ಮಾಸುರ ಮುಂತಾದವು ಸೇರಿವೆ.
ಕರ್ನಾಟಕ ಸರ್ಕಾರದ ಪ್ರತಿಷ್ಟಿತ ನಾಟ್ಯರಾಣಿ ಶಾಂತಲಾ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಗೌರವವೂ ಸೇರಿದಂತೆ ಅನೇಕ ಗೌರವಗಳು ರಾಧಾ ಶ್ರೀಧರ್ ಅವರನ್ನು ಅರಸಿ ಬಂದಿವೆ.
ಈ ಹಿರಿಯ ಕಲಾವಿದರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
On the birthday of great dance artiste and guru Radha Sridhar
ಕಾಮೆಂಟ್ಗಳು