ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಬಿಡುವಿಲ್ಲದ ಅತ್ಯಂತ ಯಶಸ್ವೀನಟ. ಆತನಷ್ಟು ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಬಹಳಷ್ಟು ಯಶಸ್ಸು ಕಂಡವರು ಅಪರೂಪ. ಕೆಲವು ಹಾಸ್ಯ, ಸಾಹಸ, ಗಂಭೀರ, ಚಿಂತನಯುಕ್ತ ಹೀಗೆ ಹಲವು ರೀತಿಯ ಪಾತ್ರಗಳಲ್ಲಿ ತನ್ನನ್ನು ಸ್ಟಾರ್ ಆಗಿ ತೋರಿಸಿಕೊಳ್ಳದೆಯೇ ಬಹುಯಶಸ್ಸನ್ನು ಗಳಿಸಿರುವ ಅಪರೂಪದ ನಟ ಈತ. ಒಂದು ರೀತಿಯಲ್ಲಿ ಈತ ಅದು ಹೇಗೆ ಇಷ್ಟು ಯಶಸ್ವೀ ಎಂದು ಚಿಂತಿಸುವಷ್ಟು ಸರಳತೆಯ ಜೊತೆಯಲ್ಲೇ, ಆತನ ನಟನಾ ಅಭಿವ್ಯಕ್ತಿಯಲ್ಲಿ ಒಂದು ಪ್ರಸನ್ನತೆಯ ಆಳ ಕೂಡಾ ಕಾಣಬರುತ್ತದೆ.
ಅಕ್ಷಯ್ ಕುಮಾರ್ ಮೂಲ ಹೆಸರು
ರಾಜೀವ್ ಹರಿ ಓಮ್ ಭಾಟಿಯಾ. ಈತ 1967ರ ಸೆಪ್ಟೆಂಬರ್ 9ರಂದು ಅಮೃತಸರದ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದರು. ಕೆಲಕಾಲ ದೆಹಲಿಯಲ್ಲಿದ್ದು ಮುಂದೆ ಮುಂಬೈಗೆ ಬಂದರು.
ಬಾಲ್ಯದಲ್ಲೇ ಅಕ್ಷಯ್ ನೃತ್ಯಪಟುವಾಗಿ ಗುರುತಿಸಲ್ಪಟ್ಟಿದ್ದರು. ಮುಂಬೈನ ಡಾನ್ ಬಾಸ್ಕೋ ಶಾಲೆಯಲ್ಲಿ ಓದಿದ ನಂತರ ಗುರು ನಾನಕ್ ಖಾಲ್ಸಾ ಕಾಲೇಜ್ (ಕಿಂಗ್ಸ್ ಸರ್ಕಲ್) ಸೇರಿದರಾದರೂ ಓದಿನಲ್ಲಿ ಆಸಕ್ತಿ ಮೂಡದೆ ಬಿಟ್ಟರು. ಬ್ಯಾಂಕಾಕ್ನಲ್ಲಿದ್ದು ಥಾಯ್ ಬಾಕ್ಸಿಂಗ್ ಕಲಿತರು. ಅಲ್ಲಿ ಕೆಲಕಾಲ ಬಾಣಸಿಗರಾಗಿಯೂ ಕಾರ್ಯ ಮಾಡಿ ಜೀವನ ದೂಡಿದ್ದರು. ಮುಂಬೈಗೆ ಮರಳಿ ಬಾಕ್ಸಿಂಗ್ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದರು. ಅವರ ವಿದ್ಯಾರ್ಥಿಗಳಲ್ಲೊಬ್ಬರು ಫೋಟೋಗ್ರಾಫರ್ ಆಗಿದ್ದವರು, ಮಾಡೆಲಿಂಗ್ ವೃತ್ತಿಯನ್ನು ಕೈಗೊಳ್ಳಲು ಇವರಿಗೆ ಶಿಫಾರಸು ಮಾಡಿದರು. ಆ ವಿದ್ಯಾರ್ಥಿಯು ಇವರಿಗೆ ಸಣ್ಣ ಕಂಪನಿಯೊಂದರಲ್ಲಿ ಮಾಡೆಲಿಂಗ್ ಕಾರ್ಯವನ್ನು ನೀಡಿದರು. ಹಲವು ತಿಂಗಳ ಮಾಡಲಿಂಗ್ ಬಳಿಕ ನಿರ್ಮಾಪಕರಾದ ಪ್ರಮೋದ ಚಕ್ರವರ್ತಿಯವರು ಅಕ್ಷಯ್ ಕುಮಾರ್ ಅವರಿಗೆ ದೀದಾರ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನೀಡಿದರು. 1991ರಲ್ಲಿ ಅಕ್ಷಯ್ ಸೌಗಂಧ್ ಚಿತ್ರದಲ್ಲಿ ನಟಿಸಿದರು.
ಅಕ್ಷಯ್ ಕುಮಾರ್ 1993ರಲ್ಲಿ ಕನ್ನಡದಲ್ಲಿ ವಿಷ್ಣುವರ್ಧನ್ ಅವರು ನಟಿಸಿದ 'ವಿಷ್ಣು ವಿಜಯ' (ಹಿಂದಿಯಲ್ಲಿ ಅಶಾಂತ್) ಚಿತ್ರದಲ್ಲಿ ನಟಿಸಿದ್ದರು. ಅಂತೆಯೇ ದಕ್ಷಿಣ ಭಾರತದ ಇತರ ಭಾಷೆಗಳ ಚಿತ್ರದಲ್ಲೂ ನಟಿಸಿದ್ದರು.
ಹಿಂದಿಯಲ್ಲಿ ಹಂತ ಹಂತವಾಗಿ ಮೇಲೇರುತ್ತಾ ಸಾಗಿದ ತಮ್ಮ ಚಿತ್ರಜೀವನದಲ್ಲಿ ಖಿಲಾಡಿ, ಮೊಹ್ರಾ, ಸಬಸೆ ಬಡಾ ಖಿಲಾಡಿ ಖಿಲಾಡಿಯೋಂಕಾ ಖಿಲಾಡಿ, ಯೇಹ್ ದಿಲ್ಲಗಿ, ಧಡ್ಕನ್, ಏಕ್ ರಿಶ್ತಾ, ಹೇರಾ ಫೇರಿ, ಮುಜ್ಸೆ ಶಾದಿ ಕರೋಗಿ, ಗರಂ ಮಸಾಲಾ, ವಕ್ತ್: ದಿ ರೇಸ್ ಎಗೈನಸ್ಟ್ ಟೈಮ್, ಅಜನಬಿ, ಆಂಕೇನ್, ಅವಾರಾ ಪಾಗಲ್ ದೀವಾನಾ, ಬೇವಫಾ, ಜಾನ್-ಎ-ಮನ್, ಹೀಟ್ 2006, ನಮಸ್ತೆ ಲಂಡನ್, ಹೇ ಬೇಬಿ, ಭೂಲ್ ಭುಲಯ್ಯಾ, ತಶಾನ್, ಸಿಂಗ್ ಈಸ್ ಕಿಂಗ್, ಚಾಂದನಿ ಚೌಕ್ ಟು ಚೀನಾ, ಕಂಬತ್ ಇಷ್ಕ್, ಹೌಸ್ ಫುಲ್, ಖಟ್ಟಾ ಮೀಟಾ, ಆಕ್ಷನ್ ರೀಪ್ಲೇ, ರೌಡಿ ರಾಥೋರ್, ಟಾಯ್ಲೆಟ್ ಏಕ್ ಪ್ರೇಮ್ಕಥಾ, ಕೇಸರಿ, ಓಹ್ ಮೈ ಗಾಡ್, ಏರ್ ಲಿಫ್ಟ್, ಮಿಷನ್ ಮಂಗಳ್ ಮುಂತಾದ ಸುಮಾರು 115 ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಅರ್ಧಕ್ಕೂ ಹೆಚ್ಚಿನ ಸಂಖ್ಯೆಯ ಚಿತ್ರಗಳು ಭರ್ಜರಿ ಯಶಸ್ಸು ಕಂಡಿವೆ.
ಅಕ್ಷಯ್ ಕುಮಾರ್ ಫಿಯರ್ ಫ್ಯಾಕ್ಟರ್ – ಖತ್ರೋಂಕೆ ಖಿಲಾಡಿ ಎಂಬ ಕಾರ್ಯಕ್ರಮದ ಮೂಲಕ ಕಿರುತೆರೆಯಲ್ಲೂ ಮೂಡಿದ್ದರು.
ಅಕ್ಷಯ್ ಕುಮಾರ್ ಸೋಲನುಭವಿಸಿದ ಚಿತ್ರಗಳಲ್ಲೂ ನಟಿಸಿದ್ದಾರೆ. ಹಾಗೆಂದು ಆತ ಸೋತಾಗ ವ್ಯತಿಥರಾಗಿ ಕುಳಿತವರಲ್ಲ. ಬರೀ ಯಶಸ್ಸಿಗಾಗಿ ತುಂಬಾ ಯೋಜಿಸಿ ವರ್ಷಕ್ಕೊ ಎರಡು ವರ್ಷಕ್ಕೋ ಒಂದು ಚಿತ್ರ ಪ್ಲಾನ್ ಮಾಡಿ ನಟಿಸುವ ಹಲವು ಸೂಪರ್ ಸ್ಟಾರ್ಗಳಂತೆ ಚಿನ್ನದ ಪಂಜರ ನಿರ್ಮಿಸಿಕೊಂಡು ಒಳಗೆ ಕುಳಿತವರಲ್ಲ.
ನಿರಂತರ ಪರಿಶ್ರಮಿಯಾಗಿ,ಅತಿಯಾಗಿ ಸ್ಟಾರ್ ಗಿರಿಯನ್ನು, ಇಮೇಜನ್ನು ತಲೆಗೆ ಹಚ್ಚಿಕೊಳ್ಳದೆ, ಕೆಲವೊಂದು ಸಾರ್ವಜನಿಕ ಹಿತಾಸಕ್ತಿ ಯೋಜನೆಗಳಿಗೆ ಯಾವ ಪ್ರಸಿದ್ಧ ತಾರೆಯೂ ನೀಡದಷ್ಟು ಉದಾರವಾಗಿ ಸದ್ದು ಗದ್ದಲವಿಲದೆ ಕೊಡುಗೆ ನೀಡಿದವರು ಅಕ್ಷಯ್ ಕುಮಾರ್.
ಅಕ್ಷಯ್ ಕುಮಾರ್ ಹರಿ ಓಂ ಎಂಟರ್ಟೈನ್ಮೆಂಟ್, ಗ್ರೇಜಿಂಗ್ ಗೋಟ್ ಎಂಬ ನಿರ್ಮಾಣ ಸಂಸ್ಥೆಗಳನ್ನೂ ಸ್ಥಾಪಿಸಿದ್ದಾರೆ. ಡೇರ್ ಟು ಡ್ಯಾನ್ಸ್ ಎಂಬ ರಿಯಾಲಿಟಿ ಷೋ ಕೂಡಾ ನಿರ್ಮಿಸಿದ್ದಾರೆ. ಖಲ್ಸಾ ವಾರಿಯರ್ಸ್ ಎಂಬ ಕಬಡ್ಡಿ ತಂಡದ ಪೋಷಕರಾಗಿದ್ದಾರೆ.
ಕೆನಡಾದ ಒಂಟಾರಿಯೋನಲ್ಲಿನ ವಿಂಡ್ಸರ್ ವಿಶ್ವವಿದ್ಯಾನಿಲಯವು ಅಕ್ಷಯ್ ಕುಮಾರ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿದೆ. ಕೆನಡಾ ದೇಶವು ಗೌರವ ಪೌರತ್ವ ನೀಡಿದೆ. 2009ರಲ್ಲಿ ದೇಶದ ಪದ್ಮಶ್ರೀ ಗೌರವ ಸಂದಿದೆ. ರುಸ್ತೋಮ್/ಏರ್ ಲಿಫ್ಟ್, ಪಾದ್ ಮಾನ್ ಚಿತ್ರಗಳ ನಟನೆಗೆ ರಾಷ್ಟ್ರೀಯ ಪುರಸ್ಕಾರ ಸಂದಿದೆ. ಅಜನಬಿ ಮತ್ತು ಗರಂ ಮಸಾಲ ನಟನೆಗೆ ಫಿಲಂಫೇರ್ ಪ್ರಶಸ್ತಿಗಳು ಸಂದಿದೆ.
On the birth day of dedicated actor Akshay Kumar
ಕಾಮೆಂಟ್ಗಳು