ರುಕ್ಮಿಣಿ ರಘುರಾಮ್
ಡಾ. ರುಕ್ಮಿಣಿ ರಘುರಾಮ್
ಲೇಖಕಿ ಮತ್ತು ಶಿಕ್ಷಣ ತಜ್ಞೆ
ಲೇಖಕ: ವಿದ್ಯಾರಣ್ಯ ವೆಂಕಟರಮಣನ್
Vidyaranya Venkataramanan
ನನ್ನ ಸಹೋದರಿ ರುಕ್ಮಿಣಿ ರಘುರಾಮ್ ಸೆಪ್ಟೆಂಬರ್ 9 ರಂದು ಬೆಂಗಳೂರಿನಲ್ಲಿ ಜನಿಸಿದರು. ನಮ್ಮ ತಂದೆ ಶ್ರೀ ಡಿ. ಆರ್. ವೆಂಕಟರಮಣನ್ ತಾಯಿ ಶ್ರೀಮತಿ ಸರಸ್ವತಿ. ನಮ್ಮ ತಂದೆ ಕನ್ನಡದ ಮೇರು ಕವಿ, ದಾರ್ಶನಿಕ, ಪತ್ರಕರ್ತ ಎಂದು ಸುಪ್ರಸಿದ್ಧರಾಗಿರುವ ಪೂಜ್ಯ ಡಾ. ಡಿ.ವಿ.ಗುಂಡಪ್ಪನವರ (ಡಿವಿಜಿ) ಶಿಷ್ಯರು. ನಮ್ಮ ತಂದೆ ತಾಯಿರಿಗೆ ನಾನು, ನಮ್ಮ ಅಕ್ಕ, ಇಬ್ಬರು ಮಕ್ಕಳು.
ಬೆಂಗಳೂರಿನ ನೆಟ್ಟ್ಕಲ್ಲಪ್ಪ ಸರ್ಕಲ್ ಬಳಿ ಇದ್ದ ಪ್ರತಿಭಾ ಬಾಲ ಮಂದಿರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪ್ರಾರಂಭಿಸಿದರು. ಇಂಗ್ಲಿಷ್ ಮಾಧ್ಯಮದ ಆ ಶಾಲೆ, ಆ ಕಾಲಕ್ಕೆ ಪ್ರಸಿದ್ಧವಾಗಿತ್ತು. ನಾವಿಬ್ಬರು ಜೊತೆಯಲ್ಲಿಯೇ ಶಾಲೆಗೆ ಹೋಗುತ್ತಿದ್ದೆವು ಮತ್ತು ಶಾಲೆಯಲ್ಲಿ ಒಟ್ಟಿಗೆ ಊಟ ಮಾಡುತ್ತಿದ್ದ ನೆನಪು ಈಗಲೂ ಹಸಿರಾಗಿದೆ. ನಮ್ಮ ತಂದೆ ಬೆಂಗಳೂರಿನ ಎನ್. ಆರ್. ಕಾಲೋನಿಯಲ್ಲಿ ಪ್ರೊಫೆಸರ್ ಸಂಪತ್ ಗಿರಿರಾಯರ ಮನೆಯಲ್ಲಿ ಇದ್ದರು. ಗೋಖಲೆ ಸಂಸ್ಥೆ ನಮ್ಮ ಮನೆಗೆ ನಾಲ್ಕಾರು ಹೆಜ್ಜೆಯ ನಡಿಗೆ. ಹಾಗಾಗಿ ನಮ್ಮ ಬಾಲ್ಯವೆಲ್ಲ ಹೆಚ್ಚು ಕಡಿಮೆ ಗೋಖಲೆ ಸಂಸ್ಥೆಯ ಆವರಣದಲ್ಲಿಯೇ, ಅಲ್ಲಿಯ ಹಿರಿಯರ ಮಧ್ಯದಲ್ಲಿಯೇ ಕಳೆಯಿತು.
ಮುಂದೆ ರುಕ್ಮಿಣಿ ಮಹಾರಾಷ್ಟ್ರ ಮಹಿಳಾ ವಿದ್ಯಾಲಯದಲ್ಲಿ ಪ್ರೌಢ ಶಾಲೆಯನ್ನು ಮುಗಿಸಿ, ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ ಪದವಿ ಹಾಗೂ ಮದರಾಸು ವಿಶ್ವವಿದ್ಯಾನಿಲಯದಿಂದ ಎ. ಆರ್. ಕೃಷ್ಣ ಶಾಸ್ತ್ರಿಗಳ ಜೀವನ ಮತ್ತು ಕೃತಿಗಳು ಕುರಿತ ಮಹಾಪ್ರಬಂಧಕ್ಕೆ ಪಿಹೆಚ್ಡಿ ಪದವಿ ಪಡೆದರು.
ರುಕ್ಮಿಣಿ 5 ವರ್ಷ ಇದ್ದಾಗಲೇ ಸಂಗೀತ ಪಾಠವನ್ನು ಶ್ರೀಮತಿ ಸರಸ್ವತಿ ಕುಮಾರ್ ಅವರ ಬಳಿ ಕಲಿತರು, ಅನಂತರ ವಿದುಷಿ ಸ್ವರ್ಣ ಶಂಕರ್ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತು ಸೀನಿಯರ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಗಳಿಸಿದರು. ಏಳನೆಯ ತರಗತಿಯಲ್ಲಿದ್ದಾಗಲೇ ನಮ್ಮ ತಂದೆಯವರು ಗೋಖಲೆ ಸಂಸ್ಥೆಯಲ್ಲಿ ಪ್ರಾರಂಭವಾಗಿದ್ದ ಗಮಕ ತರಗತಿಗೆ ರುಕ್ಮಿಣಿಯನ್ನು ಸೇರಿಸಿದರು. ಆಗ ಹೈಕೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಕೃಷ್ಣಮೂರ್ತಿಯವರು ಗಮಕ ಪಾಠಗಳನ್ನು ಹೇಳಿ ಕೊಡುತ್ತಿದ್ದರು. ಅವರ ಬಳಿ ಅಭ್ಯಾಸ ಮಾಡಿ ಗಮಕ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮುಂದೆ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಪ್ರಸಿದ್ಧ ಗಮಕಿ ಶ್ರೀಮತಿ ಸರೋಜಮ್ಮ ಅನಂತರಾಮಯ್ಯ ಅವರ ಬಳಿ ಅಭ್ಯಾಸ ಮಾಡಿ ಗಮಕ ಪ್ರೌಢ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಸರೋಜಮ್ಮನವರು ರೂಪಿಸಿದ ಡಿವಿಜಿಯವರ ಕೃಷ್ಣ ಪರೀಕ್ಷಣಂ ಕಾರ್ಯಕ್ರಮದಲ್ಲೂ ಪಾಲ್ಗೊಂಡು ಬೆಂಗಳೂರಿನ ಹಲವಾರು ಸಂಸ್ಥೆಗಳಲ್ಲಿ ಕಾರ್ಯಕ್ರಮ ನೀಡಿದರು. ಅಲ್ಲದೆ ಅವರ ಬಳಿ ಡಿವಿಜಿಯವರ ಅಂತಃಪುರ ಗೀತೆಗಳ ಗಾಯನವನ್ನು ಕಲಿತರು. ವಿದ್ವಾನ್ ಎಸ್.ಶಂಕರ್ ಹಾಗೂ ವಿದುಷಿ ಸ್ವರ್ಣ ಶಂಕರ್ ಅವರೊಂದಿಗೆ ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಗೋಖಲೆ ಸಂಸ್ಥೆಗೆ ಬರುತ್ತಿದ್ದ ಹಲವಾರು ಗಣ್ಯ ವ್ಯಕ್ತಿಗಳು ನೀಡುತ್ತಿದ್ದ ಉಪನ್ಯಾಸಗಳು, ನಮ್ಮ ಮನೆಗೆ ಬರುತ್ತಿದ್ದ ನಮ್ಮ ತಂದೆಯವರ ಆತ್ಮೀಯ ಸ್ನೇಹಿತರೊಡನೆ ಅವರು ನಡೆಸುತ್ತಿದ್ದ ಸಂಭಾಷಣೆಗಳು, ಅಲ್ಲದೆ ಸಂಸ್ಥೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳು ಅವರ ಮೇಲೆ ಗಾಢವಾದ ಪರಿಣಾಮ ಬೀರಿದವು. ಸಂಸ್ಥೆಯಲ್ಲಿ ನೆಡೆಯುತ್ತಿದ್ದ ವಾರ್ಷಿಕೋತ್ಸವ, ವೇದವ್ಯಾಸ ಪೂಜೆ ಹಾಗೂ ರಾಮ ನವಮಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ನಾವು ಪಾಲ್ಗೊಳ್ಳುತ್ತಿದ್ದೆವು. ಪ್ರತಿ ವರ್ಷವೂ ನಮ್ಮ ತಂದೆಯವರು ಡಿವಿಜಿ ತಾತ ಅವರನ್ನು ನೋಡಲು ಹಬ್ಬ ಹರಿದಿನಗಳಂದು ಕರೆದುಕೊಂಡು ಹೋಗುತ್ತಿದ್ದರು. ಆಗ ತಾತ ಅವರು ನಮ್ಮನ್ನು ಬಹಳ ಪ್ರೀತಿಯಿಂದ ಪಕ್ಕದಲ್ಲೇ ಕೂಡಿಸಿಕೊಂಡು ಮಾತನಾಡಿಸುತಿದ್ದರು. ತಾತ ಅವರ ಪ್ರೀತಿ ಮತ್ತು ಆಶೀರ್ವಾದ ನಮ್ಮನ್ಮು ಕಾಯುತ್ತಿದೆ ಎಂದು ನಮ್ಮ ತಾಯಿ ಯಾವಾಗಲೂ ಹೇಳುತ್ತಿದ್ದರು.
ಗೋಖಲೆ ಸಂಸ್ಥೆಯಲ್ಲಿ ಪ್ರತಿ ವರ್ಷ ನೆಡೆಯುತ್ತಿದ್ದ ರಾಜಾಜಿ ಸ್ಮಾರಕ ದತ್ತಿ ಉಪನ್ಯಾಸಕ್ಕೆ ಭಾರತ ರತ್ನ ಎಂ. ಎಸ್. ಸುಬ್ಬಲಕ್ಷ್ಮಿ ಹಾಗೂ ಅವರ ಪತಿ ಸದಾಶಿವಂ ಬರುತ್ತಿದ್ದರು. ಆಗ ಸಂಸ್ಥೆಯ ಪರವಾಗಿ ಅವರಿಗೆ ಮಾಲಾರ್ಪಣೆ ಮಾಡುವ ಸುಸಂದರ್ಭ ರುಕ್ಮಿಣಿಗೆ ಬಂದಿತ್ತು.
ಮೊದಲಿನಿಂದಲೂ ತಂದೆಯವರು ಪ್ರೂಫ್ ನೋಡುವುದನ್ನು, ಪದ ಕೋಶದಲ್ಲಿ ಅರ್ಥವನ್ನು ಕಂಡು ಹಿಡಿಯುವುದನ್ನು, ಅಲ್ಲದೆ ಇಂಟೊನೇಷನ್ಗಳೊಡನೆ ಭಾಷಣವನ್ನು ಮಾಡುವುದನ್ನು ಹೇಳಿಕೊಟ್ಟರು. ಹೀಗಾಗಿ ರುಕ್ಮಿಣಿ ಮದರಾಸು ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮದರಾಸಿನ ಕನ್ನಡಿಗರ ಕೂಟದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅಂತರ ಕಾಲೇಜು ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನವನ್ನು ಡಾ.ಆರ್. ಶಿವರಾಂ (ರಾಶಿ) ಅವರಿಂದ ಪಡೆಯುವ ಸುಯೋಗ ದೊರೆತಿತ್ತು. ನಮ್ಮ ತಂದೆಯವರ "ಕಗ್ಗಕ್ಕೊಂದು ಕೈಪಿಡಿ" ತಯಾರಾಗುವಾಗ ತಂದೆಯವರೊಡನೆ ಸೇರಿ ಅದರ ಕರಡನ್ನು ತಿದ್ದುವುದು ಮುಂತಾದ ಕೆಲಸವನ್ನು ಮಾಡಿದರು. ನಮ್ಮ ತಂದೆಯವರು ಬರೆದಿದ್ದ ಆತ್ಮ ಚಿಂತನೆ ಪ್ರಕಟಣೆಯಲ್ಲಿಯೂ ತೊಡಗಿಸಿಕೊಂಡರು. ನಮ್ಮತಂದೆಯವರ ೯೦ನೇ ವರ್ಷದ ಹುಟ್ಟು ಹಬ್ಬದ ಸವಿನೆನಪಿಗಾಗಿ ಒಂದು ಕಿರು ಪುಸ್ತಕವನ್ನು ನಾನು ಮತ್ತು ನನ್ನ ಸಹೋದರಿ ಪ್ರಕಟಿಸಿದೆವು.
ನಮ್ಮ ತಂದೆಯವರ ಅಗಾಧವಾದ ಪ್ರಭಾವದಿಂದ ಕನ್ನಡದಲ್ಲಿಯೇ ಬರೆಯಲು ತೊಡಗಿರುವ ರುಕ್ಮಿಣಿ ವ್ಯಕ್ತಿ ಚಿತ್ರಗಳನ್ನು ಬರೆಯಲು ಮೊದಲು ಪ್ರಾರಂಭಿಸಿದರು. ಇದರಲ್ಲಿ ತಮ್ಮ ವಿದ್ಯಾ ಗುರುಗಳಾದ ಶ್ರೀ ಕೃಷ್ಣ ಭಟ್ ಅರ್ತಿಕಜೆ, ಸಾತ್ವಿಕ ಸಾಹಿತಿ ಡಿ.ಆರ್. ವೆಂಕಟರಮಣನ್, ಡಿವಿಜಿಯವರ ವ್ಯಾಸಂಗ ಗೋಷ್ಠಿ, ವಿದ್ವಾನ್ ಎನ್. ರಂಗನಾಥಶರ್ಮ, ಬಹುಮುಖ ಪ್ರತಿಭೆ ಡಾ. ಬಿ.ಜಿ.ಎಲ್ ಸ್ವಾಮಿ, ನಮ್ಮ ನೆಚ್ಚಿನ ಹಿರಿಯಣ್ಣ ಸಂಗೀತ ಕಲಾ ರತ್ನ ಶ್ರೀ ಎಸ್. ಶಂಕರ್, ಗೋಪಾಲಕೃಷ್ಣ ಗೋಖಲೆ ಮುಂತಾದವು ಪ್ರಕಟವಾಗಿರುವ ಲೇಖನಗಳು.
ನಮ್ಮ ತಂದೆ ತಾಯಿಯವರು ದಿನವೂ ವಾಲ್ಮೀಕಿ ರಾಮಾಯಣ ಪಾರಾಯಣ ಮಾಡುತ್ತಿದ್ದರು. ಹಾಗಾಗಿ ರಾಮಾಯಣ ನಮಗೆ ಚಿರಪರಿಚಿತ. ನಮ್ಮ ತಂದೆ, ತಾಯಿಯರು ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಮುಂತಾದವನ್ನು ಮನೆಯಲ್ಲಿ ಪಾರಾಯಣ ಮಾಡುತ್ತಿದ್ದರಿಂದ ನಾವು ಅನಾಯಾಸವಾಗಿ ಚಿಕ್ಕಂದಿನಲ್ಲಿಯೇ ಇವೆಲ್ಲವನ್ನೂ ಕಲಿತುಕೊಂಡೆವು.
ರುಕ್ಮಿಣಿ ಡಿವಿಜಿಯವರ “ಶ್ರೀರಾಮ ಪರೀಕ್ಷಣಂ" ಆಧಾರದ ಮೇಲೆ ಬರೆದಿರುವ ತಾರೆಯ ಪ್ರಶ್ನೆ, ಮಂಡೋದರಿಯ ಪ್ರಶ್ನೆ, ಸೀತೆಯ ಪ್ರಶ್ನೆ ಮುಂತಾದವು ಸಣ್ಣ ಕಥೆಗಳ ರೂಪದಲ್ಲಿ ಪ್ರಕಟವಾಗಿದೆ. ಈಗ ಶ್ರೀಮದ್ರಾಮಾಯಣದ ಆಧಾರದ ಮೇಲೆ ಸಣ್ಣ ಕಥೆಗಳ ಸಂಕಲನ ಪ್ರಕಟವಾಗಲಿದೆ. ಎ.ಆರ್. ಕೃಷ್ಣ ಶಾಸ್ತ್ರಿಗಳ ಜೀವನ ಮತ್ತು ಸಾಧನೆ ಮಹಾ ಪ್ರಬಂಧವನ್ನು ಲೋಕ ಶಿಕ್ಷಣ ಟ್ರಸ್ಟ್ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಯೋಗ ನಿದ್ರಾ, ಕೊಳಲುವಾದನ ಮುಂತಾದ ಪುಸ್ತಕಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದವನ್ನು ಮಾಡಿದ್ದಾರೆ.
ರುಕ್ಮಿಣಿ ಅವರ ಆಸಕ್ತಿಯ ಕ್ಷೇತ್ರಗಳು ಸಂಗೀತ, ಶಿಕ್ಷಣ ಹಾಗೂ ಆಭರಣ ವಿನ್ಯಾಸ. ನಮ್ಮ ಮನೆಯಲ್ಲಿ ಪ್ರತಿ ದಿನವೂ ಒಂದೆರಡು ಗಂಟೆಗಳಕಾಲ ಶಾಸ್ತ್ರೀಯ ಸಂಗೀತವನ್ನು ಕೇಳುತ್ತಿದ್ದೆವು. ಅಲ್ಲದೆ ಸಂಗೀತ ಕಚೇರಿಗಳಿಗೂ ನಮ್ಮ ತಂದೆ ತಾಯಿ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಈಗಲೂ ತಪ್ಪದೇ ಭಾಗವಹಿಸುತ್ತಾರೆ.
ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ ಎಂದರೆ ಹೆಣ್ಣು ಮಕ್ಕಳ ಆಭರಣ ವಿನ್ಯಾಸ ಹಾಗೂ ಒಡವೆಗಳನ್ನು ಮಾಡಿಸುವುದು. ಸುಮಾರು 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಪರಿಣತಿ ಪಡೆದಿದ್ದಾರೆ ಹಾಗೂ ನೂರಾರು ಆಭರಣಗಳ ವಿನ್ಯಾಸವನ್ನು ಮಾಡಿದ್ದಾರೆ.
2006ರಲ್ಲಿ ಬೆಂಗಳೂರಿನ ಶಂಕರ ಮಠ ರಸ್ತೆಯಲ್ಲಿರುವ ವಿಮೆನ್ಸ್ ಪ್ಲೀಸ್ ಲೀಗ್ ಶಾಲೆಯ ಆಡಳಿತ ಮಂಡಳಿಗೆ ಸೇರಿದರು. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಶಾಲೆ 7೦ ವರ್ಷಗಳಿಂದ ಕೆಲಸ ಮಾಡುತ್ತಿದೆ. ಉದಾತ್ತ ಧ್ಯೇಯಗಳನ್ನು ಹೊಂದಿರುವ ಶಾಲೆಯ ಆಡಳಿತ ಮಂಡಳಿಯಳಿಯ ಪ್ರತಿಭಾವಂತ ಮಹಿಳೆಯರೊಡನೆ ಕೆಲಸ ಮಾಡುವ ಅವಕಾಶ ಒದಗಿ ಬಂತು. ಶಿಕ್ಷಣ ಕ್ಷೇತ್ರದಲ್ಲಿ ಬಹಳ ಆಸಕ್ತಿ ಹೊಂದಿರುವುದರಿಂದ ಈಗ ಶಾಲಾ ಆಡಳಿತ ಮಂಡಳಿಯಲ್ಲಿ ಗೌರವ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯು ಹೊರ ತರುವ ಮಕ್ಕಳ ಪತ್ರಿಕೆ ‘ನೈದಿಲೆಯ’ ಸಹ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ರುಕ್ಮಿಣಿಯವರ ಸಾಹಿತ್ಯ ಕೃಷಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಇನ್ನೂ ಮುದುವರೆಯಲಿ ಎಂದು ಹಾರೈಸುತ್ತೇನೆ.
ಕೃತಜ್ಞತೆ: Raghuram Nittoor
ಕಾಮೆಂಟ್ಗಳು