ರಾಜೇಂದ್ರ ಎಂಕಣ್ಣಮೂಲೆ
ರಾಜೇಂದ್ರ ದಾಮೋದರ ಎಂಕಣ್ಣಮೂಲೆ
ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರಾದ ರಾಜೇಂದ್ರ ದಾಮೋದರ ಎಂಕಣ್ಣಮೂಲೆ ಇಂಜಿನಿಯರಿಂಗ್, ಎಂಬಿಎ ಅಂತಹ ಸಾಧನೆ ಮಾಡಿದ್ದರೂ, ಯೋಗ ಮಾರ್ಗದರ್ಶನ, ಪರೋಪಕಾರ, ಸಮಾಜಸೇವೆಗಳಿಗೆ ತಮ್ಮನ್ನು ಮುಡಿಪಾಗಿಸಿಕೊಂಡವರು.
ರಾಜೇಂದ್ರ ದಾಮೋದರ ಎಂಕಣ್ಣಮೂಲೆ ಅವರು ಯೋಗ ಕೇವಲ ಆರೋಗ್ಯಕ್ಕಾಗಿ ಮಾತ್ರವಲ್ಲ ಅದೊಂದು ಜೀವನ ಕ್ರಮ, ಆದ್ಯಾತ್ಮ ಸಾಧನೆಯ ಮಾರ್ಗ ಎಂದು ನಂಬಿ, ಯೋಗಾಭ್ಯಾಸವನ್ನು ಜೀವನದ ಗುರಿಯಾಗಿ ಮಾಡಿಕೊಂಡವರು. ಅವರು ರಾಜೇಂದ್ರಜೀ ಅಂತಲೇ ಪರಿಚಿತರು. ಇವರು ಅಷ್ಟಾಂಗ ಯೋಗದ ನಿಯಮದಂತೆ ಶಿಸ್ತುಬದ್ಧ ಜೀವನ ಶೈಲಿ ನಡೆಸಿಕೊಂಡು ಹಲವಾರು ಜನಕ್ಕೆ ಸ್ಪೂರ್ತಿಯಾಗಿದ್ದಾರೆ . ಮೆಲ್ಬೋರ್ನ್ ಆಸ್ಟ್ರೇಲಿಯಾದಲ್ಲಿರುವ ಇವರು ಪತಂಜಲಿ ಯೋಗ ಸೂತ್ರಗಳನ್ನು ಒಳಗೊಂಡ ವಾಸುದೇವಕ್ರಿಯಾ ಯೋಗ ಸಂಸ್ಥೆ ಸ್ಥಾಪಿಸಿ ಅಲ್ಲಿನ ಸಾವಿರಾರು ಜನಕ್ಕೆ, ಮಕ್ಕಳಿಗೆ ನಿರಂತರವಾಗಿ ಯೋಗಾಭ್ಯಾಸ, ಪ್ರಾಣಾಯಾಮ, "ಓಂ ನಮೋ ಭಗವತೇ ವಾಸುದೇವಾಯ" ಜಪ ಹಾಗು ಉತ್ತಮ ವ್ಯಾಖ್ಯಾನ ಸಹಿತ ಭಗವದ್ಗೀತೆ ಹೇಳಿಕೊಟ್ಟು ಅನೇಕ ಜನರ ಉತ್ತಮ ಜೀವನ ಕ್ರಮಕ್ಕೆ ಕಾರಣರಾಗಿದ್ದಾರೆ.
ಸೆಪ್ಟೆಂಬರ್ 9 ರಾಜೇಂದ್ರ ಅವರ ಜನ್ಮದಿನ. ಕರ್ನಾಟಕ ಕೇರಳದ ಗಡಿ ಪ್ರದೇಶದ ಒಂದು ಸಣ್ಣ ಊರಾದ ಎಂಕಣ್ಣಮೂಲೆ ಅವರು ಜನಿಸಿದ ಊರು. ಅವರ ತಂದೆ ದಾಮೋದರ ಅವರು ಕಸ್ಟಮ್ಸ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ತಾಯಿ ಸತ್ಯಭಾಮ ಗೃಹಿಣಿ. ರಾಜೇಂದ್ರ ಈ ದಂಪತಿಗಳ ಮೂರು ಮಕ್ಕಳಲ್ಲಿ ಮಧ್ಯದವರು. ಮಧ್ಯಮ ವರ್ಗದಲ್ಲಿ ಬೆಳೆದ ಇವರು ಚಿಕ್ಕಂದಿನಲ್ಲೇ ಯೋಗದಲ್ಲಿ ಮತ್ತು ಸಂಸ್ಕೃತದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ತಂದೆತಾಯಿಗಳಿಂದ ಕೇಳುತ್ತಿದ್ದ ನೀತಿ ಕಥೆಗಳಿಂದ ಪರೋಪಕಾರವೇ ಜೀವನದ ಧ್ಯೇಯವೆಂದು ಮನಗಂಡಿದ್ದರು. ಇಂಜಿನಿಯರಿಂಗ್ ಪದವಿ ಪಡೆದು ನ್ಯೂಜಿಲ್ಯಾಂಡ್ ದೇಶದಲ್ಲಿ ಎಂಬಿಯ ಪದವಿ ಪಡೆದರು. ನಂತರದಲ್ಲಿ ಆಸ್ಟ್ರೇಲಿಯಾದಲ್ಲಿ ನೆಲೆಸುವ ಸಂದರ್ಭ ಒದಗಿಬಂತು.
ರಾಜೇಂದ್ರ ದಾಮೋದರ ಎಂಕಣ್ಣಮೂಲೆ ಅವರಿಗೆ ವೃತ್ತಿ ಜೀವನದಲ್ಲಿ ಅನುಭವಿಸಿದ ಕ್ಲಿಷ್ಟಕರ ಸಂದರ್ಭಗಳು ಮನಸ್ಸನ್ನು ಅಧ್ಯಾತ್ಮದ ಕಡೆಗೆ ಕೊಂಡೊಯ್ಯಿತು. ಅನೇಕ ಬಗೆಯ ಅಧ್ಯಾತ್ಮದ ಪುಸ್ತಕಗಳನ್ನು ಓದಿದ ಇವರಿಗೆ ಚಿಕ್ಕಂದಿನಲ್ಲೇ ಒಡಮೂಡಿದ್ದ ಆದರ್ಶಗಳು ಗುರಿಯಾಗಿ ಪರಿಣಮಿಸಿತು. ತಮ್ಮ ಗುರುಗಳಾದ ಮಹೇಂದ್ರಾನಂದಜಿ ಅವರ ಆಶೀರ್ವಾದ ದೊರೆತು 2004ರಲ್ಲಿ ತಮ್ಮ ಪತ್ನಿ ಸುಮನಾ ಅವರ ಸಂಪೂರ್ಣ ಸಹಕಾರದೊಂದಿಗೆ ವಾಸುದೇವ ಕ್ರಿಯಾ ಯೋಗ ಎಂಬ ಸಂಸ್ಥೆ ಯನ್ನು ತಮ್ಮ ಮನೆಯಲ್ಲೇ ಪ್ರಾರಂಭಿಸಿದರು. ಮೊದಲು ಬರುತ್ತಿದ್ದದ್ದು ಕೇವಲ ನಾಲ್ಕೇ ವಿದ್ಯಾರ್ಥಿಗಳು. ನಂತರದ ದಿನಗಳಲ್ಲಿ ಅವರ ಸಂಖ್ಯೆ ಹೆಚ್ಚುತ್ತಾ ಹೋದಂತೆ, ವಾರಾಂತ್ಯದ ತರಬೇತಿಯನ್ನು ಒಂದು ಹಾಲ್ನಲ್ಲಿ ನಡೆಸಲಾರಂಭಿಸಿದರು. ಈಗ ಅದೇ ಸಂಸ್ಥೆಯ 14 ಕೇಂದ್ರಗಳು ಮೆಲ್ಬೋರ್ನ್ನಲ್ಲಿವೆ ಹಾಗು ಅಮೆರಿಕದಲ್ಲಿವೆ. ಬೆಂಗಳೂರಿನಲ್ಲಿ ಗಿರಿನಗರದಲ್ಲಿರುವ ಅಮೃತ ಯೋಗ ಕೇಂದ್ರ ಸಹ ಈ ಸಂಸ್ಥೆಯದ್ದು. ಇವರು ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಗುರುತಿಸಿ ಅನೇಕ ಉತ್ತಮ ಯೋಗ ತರಬೇತುದಾರರನ್ನಾಗಿ ಮಾಡಿದ್ದಾರೆ. ಅವರಿಂದ ತರಬೇತು ಪಡೆದ ಶಿಕ್ಷಕ ವರ್ಗ ಯಾವುದೇ ಫಲಾಪೇಕ್ಷೆ ಇಲ್ಲದೆ ನೂರಾರು ಜನಕ್ಕೆ ಯೋಗ ಕಳಿಸಿಕೊಡುತ್ತಿದ್ದಾರೆ.
ರಾಜೇಂದ್ರ ದಾಮೋದರ ಎಂಕಣ್ಣಮೂಲೆ ಅವರು ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗದಿನಾಚರಣೆಯನ್ನು ಆಸ್ಟ್ರೇಲಿಯಾದ ರಾಷ್ಟ್ರೀಯ ಹಾಗು ರಾಜ್ಯದ ಪಾರ್ಲಿಮೆಂಟ್ನಲ್ಲಿ ಆಚರಿಸಿ ಪ್ರಮುಖ ಮಂತ್ರಿಗಳು ಹಾಗು ಸದಸ್ಯರನ್ನು ಆಹ್ವಾನಿಸಿ ಯೋಗದಿಂದ ಆರೋಗ್ಯ ಸುಧಾರಣೆಯ ಬಗ್ಗೆ ತಿಳಿಸುತ್ತಾರೆ. ಇದಲ್ಲದೆ ಆಗಾಗ್ಗೆ ಯೋಗ ಶಿಬಿರಗಳನ್ನು ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ನಡೆಸುತ್ತಾರೆ. ವರ್ಷಕ್ಕೊಮ್ಮೆ ಆಸಕ್ತ ಗುಂಪಿನೊಡನೆ ಬದ್ರಿ , ಕೇದಾರನಾಥ, ಮುಕ್ತಿನಾಥ ಯಾತ್ರೆಗಳನ್ನು ನಡೆಸುತ್ತಾರೆ. ಯೋಗ ತರಗತಿಗಳಿಂದ ಬಂದ ಶುಲ್ಕವನ್ನು, ಭಾರತ ದೇಶದಲ್ಲಿನ ಜನ ಉಪಯೋಗಿ ಕಾರ್ಯಗಳಿಗೆ ದೇಣಿಗೆ ನೀಡುತ್ತ ಬಂದಿದ್ದಾರೆ. ಕರೋನದಂತಹ ಕಷ್ಟಕಾಲದಲ್ಲೂ ಅನೇಕರಿಗೆ ಸೇವೆ, ಬೆಂಬಲಗಳನ್ನು ನೀಡಿದ್ದಾರೆ. ಕರ್ನಾಟಕದ ಅನೇಕ ಸಂಘಟನೆಗಳ ಅಡಿಯಲ್ಲಿಯೂ ಶಿಬಿರಗಳನ್ನು ನಡೆಸಿದ್ದಾರೆ.
ರಾಜೇಂದ್ರ ದಾಮೋದರ ಎಂಕಣ್ಣಮೂಲೆ ಅವರು ನಡೆಸುತ್ತಿರುವ ಸಂಸ್ಥೆಯ ಮೂಲ ಮಂತ್ರ "ಜೀವೇಮ ಶರದಶಶತಮ್ " : ಹುಟ್ಟು ಸಾವು ನಿಶ್ಚಿತ ಆದರೆ ಬದುಕಿರುವ ವರೆಗೂ ಯಾರಿಗೂ ಭಾರವಾಗದೆ ಆರೋಗ್ಯವಾಗಿರಲು ಯೋಗ ಒಂದೇ ದಾರಿ. ಲೈಫ್ ಸೂತ್ರ (ಇಂಗ್ಲಿಷ್ ) ಮೂರು ಸಂಪುಟಗಳಲ್ಲಿ ಹಾಗು ಯೋಗದಲ್ಲಿ ಅಧ್ಯಾತ್ಮ (ಕನ್ನಡ) ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಅವರ ಯು ಟ್ಯೂಬ್ ಚಾನೆಲ್ ನಲ್ಲಿ ಸುಮಾರು 1800 ಯೋಗ, ಪ್ರಾಣಾಯಾಮ ಹಾಗು ಭಗವದ್ಗೀತೆ ವಿಡಿಯೋಗಳು ಲಭ್ಯವಿದೆ. ಹೆಚ್ಚಿನ ವಿವರಗಳು https://youtu.be/nengpa3Tgsc?si=Yu5T4mEBJUgU3F3Z ಮತ್ತು https://www.facebook.com/vasudevakriyayoga.rajendra
ಕೊಂಡಿಗಳಲ್ಲಿ ಲಭ್ಯವಿದೆ.
ಲೇಖನ ಕೃಪೆ: ಪಲ್ಲವಿ ವರುಣ್ Pallavi Varun
On the birthday of Yogaacharya Rajendra Damodara Enkannamule
ಕಾಮೆಂಟ್ಗಳು