ಪ್ರಸನ್ನ ವೆಂಕಟದಾಸರು
ಪ್ರಸನ್ನ ವೆಂಕಟದಾಸರು
ಪ್ರಸನ್ನ ವೆಂಕಟದಾಸರು ಹರಿದಾಸ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರು.
ಪ್ರಸನ್ನ ವೆಂಕಟದಾಸರ ಕಾಲ ಕ್ರಿಶ 1680ರಿಂದ 1752 ಎನ್ನಲಾಗಿದೆ. ಇವರ ಮೂಲ ಹೆಸರು ಕಾಖಂಡಕಿ ವೆಂಕಪ್ಪ. ಬಾಗಲಕೋಟೆಯ ವೈದಿಕ ವಂಶಸ್ಥ ಕಾಖಂಡಕಿ ನರಸಪ್ಪಯ್ಯಾ ಇವರ ತಂದೆ. ತಾಯಿ ಲಕ್ಷ್ಮೀಬಾಯಿ. ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡರು. ಹೀಗಾಗಿ ವ್ಯವಸ್ಥಿತ ವಿದ್ಯಾಭ್ಯಾಸ ದೊರಕಲಿಲ್ಲ. ತ್ರಿಸಂಧ್ಯಗಳಲ್ಲೂ ನಿಯಮದಿಂದ ಸಂಧ್ಯಾವಂದನ ಗಾಯತ್ರೀ ಜಪವನ್ನು ಮಾಡುವುದು ಶ್ರೀವೆಂಕಟೇಶಸ್ತೋತ್ರ ಹೇಳಿಕೊಳ್ಳುವುದು ಅವರ ನಿತ್ಯ ದಿನಚರಿಯಾಗಿತ್ತು.
ಒಂದು ದಿನ ಬಿಸಿಲಿನ ತಾಪಕ್ಕೆ ಬಾಯಾರಿಕೆ ನೀಗಲು ಅತ್ತಿಗೆಯನ್ನು ಮಜ್ಜಿಗೆ ಕೊಡಿ ಎಂದು ಕೇಳಿದ್ದೇ ರಾದ್ಧಾಂತವಾಗಿ, ವೆಂಕಪ್ಪ ಮನೆಬಿಟ್ಟು ತಿರುಪತಿ ವೆಂಕಟೇಶನ ದರುಶನಕ್ಕಾಗಿ ಹೊರಟುಬಿಟ್ಟರು.
ಶ್ರೀನಿವಾಸನಿಗೆ ಶರಣಾಗಿ ಇಹವನ್ನು ಮರೆತು ಕುಳಿತ ವೆಂಕಪ್ಪನ ನಾಲಿಗೆಯ ಮೇಲೆ ಅಲೌಕಿಕ ಚೇತನವು 'ಶ್ರೀನಿವಾಸ’ ಎಂದು ಬರೆದಂತೆ ಭಾಸವಾಯಿತು. ಇಷ್ಟದೈವದ ಪರಮಾನುಗ್ರಹ ಎಂದು ತಿಳಿದು ವೆಂಕಪ್ಪ ಆ ಘಳಿಗೆಯಿಂದ ಹರಿದಾಸರಾದರು. ಶ್ರೀನಿವಾಸ ಪ್ರಸನ್ನನಾದ ಕಾರಣ "ಪ್ರಸನ್ನ ವೆಂಕಟೇಶ’’ ಅಂಕಿತವು ಇವರ ಅಭಿವ್ಯಕ್ತಿಗೆ ಸಂಕೇತವಾಯಿತು.
ಪ್ರಸನ್ನ ವೆಂಕಟದಾಸರು ಕೆಲ ಕಾಲ ತಿರುಪತಿಯಲ್ಲಿಯೇ ನೆಲೆಸಿದರು. ಬಾಳಿನ ಕತ್ತಲೆ ಸರಿದು, ಅವರಿಗೆ ವಿದ್ಯಾಭ್ಯಾಸ ಮಾಡಬೇಕೆನಿಸಿತು. ಆಗ ಬಾಗಲಕೋಟೆಯ ಮುದ್ಗಲ ಜನಾರ್ಧನಾಚಾರ್ಯರು ಗುರುಗಳಾಗಿ ಮಾರ್ಗದರ್ಶನ ನೀಡಿದರು.
ದಾಸರು ತಮ್ಮ ವ್ಯಕ್ತಿತ್ವದಿಂದ ಮತ್ತು ತಮ್ಮ ಕೃತಿಗಳಿಂದಾಗಿ ಬಹಳ ಬೇಗ ಕೀರ್ತಿ ಗಳಿಸಿದರು. ಜನ ಇವರಿಗೆ ದಾನ-ದತ್ತಿಗಳನ್ನು ನೀಡಿ ಗೌರವಿಸಿದರು. ಇದರಿಂದಾಗಿ ಅವರ ಆರ್ಥಿಕ ಸ್ಥಿತಿ ಸುಧಾರಿಸಿತು.
ಪ್ರಸನ್ನ ವೆಂಕಟದಾಸರ ಕಾಲವು ಯುದ್ಧಕಲಹ, ಪುಂಡಾಟಿಕೆಗಳಿಂದ ಪ್ರಕ್ಷುಬ್ಧವಾಗಿತ್ತೆಂಬ ಅಂಶ ಎದ್ದುಕಾಣುತ್ತದೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಪ್ರಸನ್ನ ವೆಂಕಟದಾಸರು ಆಂತರಿಕ ಶತ್ರುಗಳಾದ ಕಾಮಕ್ರೋಧಾದಿ ಷಡ್ರಿಪುಗಳನ್ನು ಬಾಹ್ಯಶತ್ರುಗಳಾದ ಪುಂಡರನ್ನೂ ಪ್ರತಿಭಟಿಸುವಂತೆ ಯುದ್ಧ ಭಾಷೆಯಲ್ಲಿ ಬರೆದಿದ್ದಾರೆ.
“ಶ್ರೀಲೋಲನಂಘ್ರಿ ಸಂಬಂಧ ಕೈಗೂಡಿ
ತಾಳ ದಂಡಿಗೆ ಗೀತಾಯುಧಗಳಿಂದ
ಕಾಲಕಾಲಕ್ಕೆ ನಿಮ್ಮ ಮೇಳವ ಮುರಿದಾಡಿ
ಕಾಳು ಮಾಡುವೆ ಕೈಯಲ್ಲಿ ಕಡ್ಡಿ ಕೊಡುವೆ’’
ಶ್ರೀ ಪ್ರಸನ್ನ ವೆಂಕಟದಾಸರು ಊರಿಂದೂರಿಗೆ ಹೋಗುವಾಗ ಕಾಡಿನ ಮಧ್ಯದಲ್ಲಿ ಹುಲಿ ಎದುರಾದರೆ ಅದರ ಮೂಗು ಚಪ್ಪರಿಸಿ ಅದರ ಮೇಲೆ ದೇವರ ಕಂಟಲಿಯನ್ನು ಹೇರಿ ತಮ್ಮೊಡನೆ ಊರು ಸಿಕ್ಕುವವರೆಗೂ ಕರೆದೊಯ್ಯುತ್ತಿದ್ದರಂತೆ. ಊರು ಸಿಕ್ಕಿದ ಕೂಡಲೇ ಗೋವುಗಳನ್ನು ಬಾಧಿಸಬೇಡವೆಂದು ಹೇಳಿ ಅದರ ಹಣೆಗೆ ಅಂಗಾರ ಹಚ್ಚಿ ಹಿಂದಕ್ಕೆ ಕಳುಹಿಸುತ್ತಿದ್ದರಂತೆ. ದಾಸರು ಅಂಗಾರ ಹಚ್ಚಿದ ಹುಲಿಗಳು ಹಸುಗಳ ತಂಟೆಗೆ ಹೋಗುತ್ತಿರಲಿಲ್ಲವಂತೆ. ಈ ಕಾರಣದಿಂದ ಹತ್ತಿರದ ಗ್ರಾಮಗಳ ಜನರು ಅವರನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಹೀಗೆ ಹುಲಿಗಳಿಗೆ ಅಂಗಾರ ಹಚ್ಚುತ್ತಿದ್ದ ದಾಸರಿಗೆ ಜನ "ಅಂಗಾರದ ಆಚಾರ್ಯರು’’ ಎಂದು ಹೆಸರಿಟ್ಟಿದ್ದರಂತೆ.
"ತೊಲ ತೊಲಗೆಲೋ ಕಲಿಯೆ ನಿಲ್ಲರಿಲ್ಲಿ
ತೊಲ ತೊಲಗೆಲೋ ಕಲಿಯ ಸೆರೆ ಸಲಿಗೆಯ ಬಿಡು
ಸಲಿಲಜ್ಞಾನದ ದಾಸರಾ"
ಎಂದ ಪ್ರಸನ್ನ ವೆಂಕಟದಾಸರ ಭಾಷಾ ಪ್ರಯೋಗ ವಿಶಿಷ್ವವಾದದ್ದು.
ಸತ್ಯಭಾಮಾವಿಲಾಸ, ನಾರಾಯಣಪಂಚಕ, ಸಮಸ್ತ ನಾಮಮಣಿಗಣ ಪಚ್ಚರಣ ಪದ್ಯಮಾಲಾ, ಭೇದಮುಕ್ತಾವಲೀ, ನಾರದ ಕೊರವಂಜಿ, ಕೃಷ್ಣಪಾರಿಜಾತ, ಭಾಗವತದ ದಶಾಮಸ್ಕಂದ ಕೃಷ್ಣಲೀಲೆಯನ್ನು ಸೊಗಸಾಗಿ ಕನ್ನಡದಲ್ಲಿ ಅನುವಾದ ಮಾಡಿರುವುದು ಪ್ರಸನ್ನ ವೆಂಕಟದಾಸರ ಅಸಾಧಾರಣ ಪಾಂಡಿತ್ಯಕ್ಕೆ ಸಾಕ್ಷಿ. ಇವರು ಸಂಗೀತಶಾಸ್ತ್ರಕೋವಿದರೂ ಆಗಿದ್ದರೆಂಬುದು ಇವರ ಕೃತಿಗಳಿಂದಲೇ ತಿಳಿಯುತ್ತದೆ. ಭಿನ್ನ ಭಿನ್ನ ರಸಗಳಿಗೆ ಅನುರೂಪವಾಗಿ ಭಿನ್ನ ಭಿನ್ನ ರಾಗಗಳನ್ನು ಪದಸಂಯೋಜನೆ ಮಾಡಿರುವಂತೆ ತೋರುತ್ತದೆ. ಅವರ ಪದಲಾಲಿತ್ಯವು ಮಧುರವಾದದ್ದು. ಇವಲ್ಲದೆ ಹಳ್ಳಿ ಜನರು ಹೇಳುವ ರಾಗದಲ್ಲಿ ಪರಸನ್ನ ವೆಂಕಟ, ಪರಸನ್ನ ಕೃಷ್ಣ ಎಂಬ ಮುದ್ರಿಕೆಯಿಂದ ಸುವ್ವಾಲೆ, ಜೋಗುಳಗಳನ್ನು ಬರೆದಿದ್ದಾರೆ.
ಉತ್ತರ ಕರ್ನಾಟಕದ ಜನತೆಯಲ್ಲಿ ಸಾಕಷ್ಟು ಪ್ರಭಾವ ಬೀರಿದ ದಾಸರು ಭಾವುಕರ ಹೃದಯದಲ್ಲಿ ಅಚ್ಚೋತ್ತಿ ತುಂಬು ಬಾಳನ್ನು ನಡೆಸಿ, ಬಾದಾಮಿಯಲ್ಲಿ ಕೊನೆಯ ದಿನಗಳನ್ನು ಕಳೆದರು. ಭಾದ್ರಪದ ಶುದ್ಧ ದ್ವಾದಶೀಯಂದು ವೈಕುಂಠವಾಸಿಗಳಾದರೆಂದು ತಿಳಿಯುತ್ತದೆ.
ಬಾದಾಮಿಯ ಪೂರ್ವಕ್ಕೆ ಇರುವ ಗುಡ್ಡದ ಕೆಳಗೆ ಒಂದು ಹೊಂಡವಿದ್ದು ಅದರ ದಡದ ಮೇಲೆ ಅವರ ವಂಶಜರಾದ ಅಣ್ಣಯ್ಯಾಚಾರ್ಯರು ದಾಸರ ಸ್ಮಾರಕವಾಗಿ ಕಟ್ಟೆಯೊಂದನ್ನು ಕಟ್ಟಿದ್ದಾರೆ.
ಕುಲಪುರೋಹಿತ ಆಲೂರು ವೆಂಕಟರಾಯರು ಮತ್ತು ಮಿತ್ರರು ಶ್ರೀಪ್ರಸನ್ನ ವೆಂಕಟದಾಸರ ಬಗೆಗೆ ಆಳವಾದ ಅಧ್ಯಯನ ನಡೆಸಿದರು.
ಜಗದ ಅಘಹರ, ತ್ರಿಗುಣಾತೀತ, ಭಯಶಮನ ಎಂದು ಭಗವಂತನನ್ನು ಕೀರ್ತನೆಗಳಿಂದ ಹಾಡಿ ಹೊಗಳಲು ಆರಂಭಿಸಿದ ದಾಸರು ನಾದೋಪಾಸನೆಯಲ್ಲಿ ಮೈಮರೆತು ನೂರಾರು ಪದ, ಸುಳಾದಿ, ಉಗಾಭೋಗಗಳನ್ನು ರಚಿಸಿದರು. ಪುರಾಣ ಉಪನಿಷತ್ಗಳ ಸಾರವನ್ನು ತಿಳಿಗನ್ನಡದಲ್ಲಿ ಸಾರಿದರು. ನವವಿಧ ಭಕ್ತಿಯ ಪದ್ಯಗಳು, ನಾರದ ಕೊರವಂಜಿ ವೇಷ ತಾಳಿದ ಚರಿತ್ರೆ, ಸಮಸ್ತ ನಾಮ ಮಣಿ ಷಟ್ಚರಣ ಪದ್ಯಮಾಲಾ, ನಾರಯಣ ಪಂಜರ ಮತ್ತಿತರ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು. ಇವರು ರಚಿಸಿದ `ಶ್ರೀಮದ್ದಶಾಮ ಸ್ಕಂದ ಭಾಗವತ ಭೂಮಿಪ ಪರೀಕ್ಷಿತನು ಧೀಮಜ್ಜನ ಗುರು ಶುಕ ಮುನಿಗೆ ನಮಿಸಿ ಪ್ರೇಮದಿ ಕೇಳಿದನು’ ಎಂಬ ಕೀರ್ತನೆಯಿಂದ ‘ ಈ ದಶಮಸ್ಕಂದ ಭಾಗವತ ಪೂರ್ವಾರ್ಧವು ಮೇದಿನಿಯಲಿ ಹೇಳಿ ಕೇಳಿದುರ್ಗೆ ಯಾದವ ಕುಲರತ್ನ ಸರ್ವಪುರುಷಾರ್ಥವ ಸಾಧಿಸಿಕೊಡುವ ಸತ್ಯವು ನಿತ್ಯ’ ಎಂಬ 60ಕ್ಕೂ ಹೆಚ್ಚು ಕೃತಿಗಳನ್ನು ಒಟ್ಟುಗೂಡಿಸಿದರೆ ವೇದವ್ಯಾಸರ ಭಾಗವತ ದಶಮಸ್ಕಂದದ ಪೂರ್ವಾರ್ಧವನ್ನೇ ಕನ್ನಡಕ್ಕಿಳಿಸಿದಂತಿದೆ.
ಹರಿಕಥೆಗೆ ಬೇಸತ್ತು ಹರಟಿಯನು ಕೇಳುವವ, ಹರಿಯ ಗುಣ ಹೊಗಳದೊಣ ಪಂಟು ಬಡಿವವ.. ಕಲು ಗುಂಡಿನಂತೆ ಕಟ್ಟೆದೆ ತೊಯ್ಯದು.., ಈ ದೇಹ ಮನವೇ ಘಾಳಿ ದೀಪಾ.. ನಚ್ಚತ್ಲ ತೋಲೆ, ಚಂದಮಾಮನ ಇತ್ತಿತ್ತ ಕಲೆತಾಲೆ.. ಎಂಬ ಕೃತಿಗಳಲ್ಲಂತೂ ಉತ್ತರ ಕರ್ನಾಟಕದ ಆಡು ಭಾಷೆ ಸ್ಫುಟವಾಗಿ ಕಾಣುತ್ತದೆ.
ಅಂಗರು ಹಂಗಳು ಅಂಗನಂತಗಡ, ಮಂಗಳ ಪಾಂಗ ವಿಶ್ವಂಗಳ ಮಂಗಳ
ಶಿಂಗರದಂಗುಟ ಸಂಗದ ಗಂಗಜ, ಗಂಗಳ ಘಂಗಳ ಹಿಂಗಿ ಪಳಾಂಗಾ !! ಎಂಬ
ಕೀರ್ತನೆ ಕನ್ನಡ ಭಾಷೆಯ ಮೇಲೆ ದಾಸರಿಗಿದ್ದ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ.
ಹೇಳಿದ ಯಮ ತನ್ನೂಳಿದವರಿಗೆ ಖೂಳ ದುರಾತ್ಮರಾಗಿ ಬಾಳುವವರನು ತರ ! ಗುರುಹಿರಿಯರೊಳಗೆ ಪ್ರತ್ಯುತ್ತರ ಕೊಡುವವರ, ಪರನಾರೇರ ನಾಳು ದುರುಳರ ಕಟ್ಟಿ ತರ ಎಂಬ ನೀತಿ ಪದಗಳ ಮೂಲಕ ಪ್ರಸನ್ನ ವೆಂಕಟದಾಸರು ಸಮಾಜ ತಿದ್ದುವ ಕೆಲಸಕ್ಕೂ ಮುಂದಾಗಿದ್ದರು.
ಅಂದಾಜು ಏಳು ದಶಕಗಳ ಕಾಲ ಭುವಿಯಲ್ಲಿದ್ದು, ಬಾದಾಮಿಯಲ್ಲಿ ದಾಸರು ಅವತಾರ ಸಮಾಪ್ತಿಗೊಳಿಸಿದ ಸ್ಥಳದಲ್ಲಿ ಇಂದಿಗೂ ಒಂದು ಕಟ್ಟೆಯಿದೆ.
Prasanna Venkatadasa
ಪ್ರಸನ್ನ ವೆಂಕಟದಾಸರ ಬಗ್ಗೆ ತಿಳಿದುಕೊಂಡದ್ದು ಸಾರ್ಥಕವಾಯಿತು. ಅವರ ಬಗ್ಗೆ ಇರುವ ಚಲನಚಿತ್ರವನ್ನು ನೋಡಬೇಕೆಂಬ ಆಸೆ. ಗೋಪಿಕಾ ವಿ ರಾಮ್
ಪ್ರತ್ಯುತ್ತರಅಳಿಸಿ