ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀರಾಮ್ ಕಲಾನಿಲಯಂ


 ಶ್ರೀರಾಮ್ ಕಲಾನಿಲಯಂ


 ಶ್ರೀರಾಮ್ ಕಲಾನಿಲಯಂ ಅಂದರೆ ಮೊದಲು ಕಣ್ಮುಂದೆ ಬರುವುದು ಅವರ  ಎತ್ತರದ ಹಸನ್ಮುಖಿ ಸುರದ್ರೂಪ.  ಅವರೊಬ್ಬ ಶಿಲಾಶಾಸನ ಶಿಲ್ಪಿಯಾಗಿ ಹೆಸರಾಗಿದ್ದಾರೆ.  ಅವರ ಸಾಂಸ್ಕತಿಕ ಕಲಾ ಪರಂಪರೆಯ ಕುಟುಂಬದ ಹಿನ್ಬೆಲೆಯ 'ಕಲಾನಿಲಯಂ' ಅವರ ಜೊತೆಗಿದೆ. 

ನವೆಂಬರ್ 11 ಶ್ರೀರಾಮ್ ಅವರ ಜನ್ಮದಿನ. 
ಇವರ ತಾತ ಅ. ನ. ಲಕ್ಷ್ಮಿನಾರಾಯಣರಾಯರು ಮಹಾನ್ ಕಲಾವಿದರಾದ ಕಲಾಮಂದಿರದ ಅ. ನ. ಸುಬ್ಬರಾಯರ ಅಣ್ಣ. 

ಶ್ರೀರಾಮ್ ಅವರ ತಾತ  ಅ. ನ. ಲಕ್ಷ್ಮಿನಾರಾಯಣರಾಯರು  ತಮ್ಮ ಸಹೋದರ ಅ.ನ.ಸು ಅವರ ಒತ್ತಾಸೆಯಲ್ಲಿ ಶಿವಮೊಗ್ಗದಲ್ಲಿ 'ಕಲಾನಿಲಯಂ' ಎಂಬ ಆರ್ಟ್ ವರ್ಕ್ಸ್ ಇಟ್ಟುಕೊಂಡು  ಶಿವಮೊಗ್ಗದಲ್ಲಿ ನೆಲೆನಿಂತರು. 

ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ದೊಡ್ಡ‍ ಕುಟುಂಬದ ನಿರ್ವಹಣೆಯ ಹೊಣೆ ಹೊತ್ತ ಶ್ರೀರಾಮ್ ತಮ್ಮ ಕಾಲೇಜು ಶಿಕ್ಷಣವನ್ನು ನಿಲ್ಲಿಸಿ, ಶಿಲ್ಪಿಯಾಗಿ ಕಾಯಕ ಆರಂಭಿಸಿದರು.  ವಿಶೇಷವಾಗಿ ಶಿಲೆಗಳ ಮೇಲೆ ಕನ್ನಡದ ಅಕ್ಷರಗಳನ್ನು ಮೂಡಿಸುವಲ್ಲಿ ಹೆಸರಾದರು.  ಅಂದಿನ ದಿನಗಳಲ್ಲಿ ಈ ಕೆಲಸ ಕರಕುಶಲತೆಯಿಂದ ಆಗಬೇಕಿತ್ತು. ಹೀಗೆ ಅವರು ಮಾಡಿದ ಕಲಾ ಶಾಸನಗಳನ್ನೊಳಗೊಂಡ ಫಲಕಗಳು ತಲುಪಿದ ವ್ಯಕ್ತಿಗಳು, ಭವನಗಳು ಮತ್ತು ಗೃಹಗಳು ಅನೇಕ.  ಶ್ರೀರಾಮ್ ಅವರು ಇನ್ನೂ 16ರ ಬಾಲಕರಾಗಿದ್ದಾಗ ಕುವೆಂಪು ಅವರು ಜನಿಸಿದ ಹಿರೇಕೊಡಿಗೆಯಲ್ಲಿ ನಿರ್ಮಾಣವಾದ ಭವನದಲ್ಲಿ ಕನ್ನಡವನ್ನು ಶಿಲೆಯ ಮೇಲೆ ಮೂಡಿಸುವ ಕೆಲಸ ಮಾಡಿದರು.  ಈ ಕೆತ್ತನೆಯಲ್ಲಿನ ಪ್ರತಿಯೊಂದನ್ನೂ ಓದಿದ ಸ್ವಯಂ ಕುವೆಂಪು ಅವರು, ಒಂದಿನಿತೂ ತಪ್ಪಿಲ್ಲದೆ ಮಾಡಿದ ಕೆಲಸವನ್ನು ಅಕ್ಕರೆಯಿಂದ ಮೆಚ್ಚಿ ಶ್ರೀರಾಮ್ ಅವರನ್ನು ಹರಸಿದರು.  

ಇತ್ತೀಚಿನ ಯುಗದಲ್ಲಿ ಶ್ರೀರಾಮ್ ಅವರು ತಮ್ಮ ತಮ್ಮ ಕಲಾನಿಲಯಂ ಸ್ಟುಡಿಯೋಸ್ ಮೂಲಕ ಈ ಕೆತ್ತನೆಯ ಕೆಲಸವನ್ನು ಹಲವು ಉದ್ಯೋಗಿಗಳ ಮೂಲಕ ಯಂತ್ರ ವ್ಯವಸ್ಥೆಯಲ್ಲಿ ಶಿಲೆಗಳು ಮತ್ತು ಲೋಹಗಳ ಮೇಲೆ ರೂಪಿಸಿ ಗ್ರಾಹಕರು ಮೆಚ್ಚುವ ಹಾಗೆ ಕೆಲಸ ಮಾಡುವುದರ ಜೊತೆಗೆ ಅನೇಕರಿಗೆ ಉದ್ಯೋಗ ನೀಡಿದ್ದಾರೆ.

ಶ್ರೀರಾಮ್ ಅವರ ಆತ್ಮೀಯ ಬಂಧುಗಳ ವ್ಯಾಪ್ತಿ ಬಲು ದೊಡ್ಡದು.  ಆ ವಿಶಾಲ ವ್ಯಾಪ್ತಿ ಸಮಾಜದ ಶ್ರೇಷ್ಠ ಸಾಧಕ ಬಂಧುಗಳನ್ನೂ ಒಳಗೊಂಡಿರುವಂತದ್ದು.  ಹಾಗೆಯೇ ಅವರ ಸಾಹಿತ್ಯ, ಸಂಸ್ಕೃತಿ, ಸಂಗೀತ, ನಾಟಕ, ಕಲೆ, ಯೋಗ, ಧ್ಯಾನ, ಪ್ರಕೃತಿ ಪ್ರೇಮ, ಸೈಕಲ್ ಸವಾರಿ, ಛಾಯಾಗ್ರಹಣ ಮುಂತಾದ ಆಸಕ್ತಿಗಳ ವ್ಯಾಪ್ತಿಯೂ ಬಲು ದೊಡ್ಡದು.

ನನಗೆ ಶ್ರೀರಾಮ್ ಅವರನ್ನು ಮೊದಲು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡಾಗ, ಅವರ ವರ್ಚಸ್ಸನ್ನು ಕಂಡು ಅವರೊಬ್ಬ ಪ್ರಖ್ಯಾತ ಅಭಿನಯ ಕಲಾವಿದರೆನಿಸಿತ್ತು.  ಅವರು ಅಭಿನಯ ಕ್ಷೇತ್ರದಲ್ಲಿ ಇಲ್ಲ. ಆದರೆ ಅವರು ದೊಡ್ಡ ಕಲಾವಿದರು.  ಅವರ ಸಾಧನೆ ಅಪಾರ.  ಇವೆಲ್ಲಕ್ಕೂ ಮೀರಿದ್ದು ಅವರು ಎಲ್ಲರೊಡನೆ ಇರಿಸಿಕೊಂಡಿರುವ ಸ್ನೇಹ ಬಾಂಧವ್ಯ.  ಇದೇ ಬದುಕನ್ನೇ ಕಲೆಯಾಗಿಸಿಕೊಂಡಿರುವ ಅವರ ನಿಜ ಸಾಧನೆ.

ಶ್ರೀರಾಮ್ ಕಲಾನಿಲಯಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

Happy birthday Sreeram Kalanilayam Sir 🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ